Health

ಮೊಹಲ್ಲಾ ಕ್ಲಿನಿಕ್‌ನಲ್ಲಿ ಸಿರಪ್‌ ಸೇವನೆ; ಮೂವರು ಮಕ್ಕಳ ಮರಣ..!

ನವದೆಹಲಿ : ದೆಹಲಿ ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಕೆಮ್ಮಿನ ಸಿರಪ್ ಸೇವಿಸಿ‌, ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಒಟ್ಟು 16 ಮಕ್ಕಳು ಅಸ್ವಸ್ಥರಾಗಿದ್ದಾರೆಂದು ತಿಳಿದುಬಂದಿದೆ. ಎಲ್ಲಾ ಮಕ್ಕಳನ್ನೂ ಕಲಾವತಿ ಸರನ್ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಮಕ್ಕಳಿಗೆ ಕೆಮ್ಮಿನ ಔಷಧ ನೀಡಿದ ನಂತರ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಮಕ್ಕಳು ಸಿಪರ್‌ ಸೇವಿಸಿದ ನಂತರ ಅದು ವಿಷವಾಗಿ ಮಾರ್ಪಟ್ಟಿದ್ದರಿಂದ ಈ ದುರ್ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶಕರು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಔಷಧ ನೀಡದಂತೆ ಸೂಚನೆ ಹೊರಡಿಸಿದ್ದಾರೆ.

ಮಕ್ಕಳಿಗೆ ನೀಡಿದ್ದ ಔಷಧ ಕೆಮ್ಮಿನ ಔಷಧಿಯಾಗಿದೆ. ಇದನ್ನು ಬಹುರಾಷ್ಟ್ರೀಯ ಕಂಪನಿಯೊಂದು ತಯಾರಿಸಿದೆ. ಆದರೆ ಇದು ಸೇವಿಸಿದ್ದರಿಂದ ಮಕ್ಕಳ ಮೇಲೆ ಅಡ್ಡಪರಿಣಾಮವಾಗಿದೆ. ಹೀಗಾಗಿಯೇ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಕಾರಣದಿಂದ ಎಲ್ಲಾ ಮೊಹಲ್ಲಾ ಕ್ಲಿನಿಕ್‌ಗಳಲ್ಲಿರುವ ಈ ಕೆಮ್ಮಿನ ಔಷಧಿಯನ್ನು ವಾಪಸ್‌ ಪಡೆಯುವಂತೆ ಸೂಚನೆ ನೀಡಲಾಗಿದೆ.

 ಮೊಹಲ್ಲಾ ಕ್ಲಿನಿಕ್ ದೆಹಲಿಯ ಜನರಿಗೆ ಉಚಿತ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ದೆಹಲಿ ನಗರದಲ್ಲಿ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಕೈಗೊಂಡ ಪ್ರಮುಖ ಆರೋಗ್ಯ ಸೇವೆ ಇದಾಗಿದೆ.ದೆಹಲಿಯಲ್ಲಿ 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್‌ಗಳಿವೆ.

Share Post