Districts

ಹಿಜಾಬ್‌ ವಿವಾದ : ‌ಸರಣಿ ಟ್ವೀಟ್‌ ಮಾಡಿ ಕ್ಷಮೆಯಾಚಿಸಿದ ಜಮೀರ್‌ ಅಹ್ಮದ್

ಬೆಂಗಳೂರು : ಭಾರತದಲ್ಲಿ ಅತ್ಯಾಚಾರ ಹೆಚ್ಚಾಗಲು ಬುರ್ಖಾ ಪದ್ಧತಿ ಇಲ್ಲದಿರುವುದೇ ಕಾರಣ ಎಂದು ಹೇಳಿದ್ದ ಜಮೀರ್‌ ಅವರ ಹೇಳಿಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು ಹಾಗೆಯೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಲಾಗಿತ್ತು.

ಇನ್ನು ಕಾಂಗ್ರೆಸ್‌ನ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಕೂಡ ಜಮೀರ್‌ ಅವರು ಕ್ಷಮೆ ಕೇಳಬೇಕು ಎಂದು ಹೇಳಿದ್ದರು. ಇದರ ಪರಿಣಾಮ ಜಮೀರ್‌ ಅವರು ಟ್ವಿಟರ್‌ನಲ್ಲಿ ಸರಣಿ ಟ್ವೀಟ್‌ ಮಾಡುವ ಮೂಲಕ ಕ್ಷಮೆ ಕೇಳಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ

ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ – ಅತ್ಯಾಚಾರಗಳನ್ನು ಕಂಡಾಗ ಭಯ – ಆತಂಕ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಹಿಜಾಬ್ – ಬುರ್ಖಾ ಧರಿಸುವುದರಿಂದಾದರೂ ಅತ್ಯಾಚಾರವನ್ನು ತಡೆಗಟ್ಟಬಹುದೇನೋ ಎಂಬ ಮಾತನ್ನು ನಾನು ಆಡಿದ್ದೆ.

 

ಹಿಜಾಬ್ – ಬುರ್ಖಾ ಧರಿಸುವುದನ್ನು ಧಾರ್ಮಿಕ ಕಟ್ಟಳೆಯನ್ನಾಗಿ ಮಾಡಿದ ನಮ್ಮ ಹಿರಿಯರ ಉದ್ದೇಶವೂ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದೇ ಆಗಿದೆ. ಈ ಹಿನ್ನೆಲೆಯಲ್ಲಿ ನನ್ನಿಂದ ಆ ಮಾತುಗಳು ಬಂತು. ಇದರ ಹೊರತಾಗಿ ಬೇರೆ ಯಾವ ದುರುದ್ದೇಶವೂ ನನಗಿರಲಿಲ್ಲ

ಇತ್ತೀಚೆಗೆ ಅರ್ಧ ಹೆಲ್ಮೆಟ್ ಬದಲು ಫುಲ್ ಹೆಲ್ಮೆಟ್ ಅನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಈ ನಿಲುವಿನ ಹಿಂದೆ ಜನರ ಜೀವ ರಕ್ಷಣೆಯ ಉದ್ದೇಶ ಹೇಗಿದೆಯೋ ಹಾಗೆಯೇ ನನ್ನ ಹೇಳಿಕೆ ಹಿಂದೆ ಹೆಣ್ಣು ಮಕ್ಕಳ ಬಗೆಗಿನ ಕಾಳಜಿ ಇದೆ.

ಹೌದು, ಹೆಣ್ಣು ಮಕ್ಕಳ ಅತ್ಯಾಚಾರಕ್ಕೆ ಅವರ ಮೈಮೇಲಿನ ಬಟ್ಟೆ ಖಂಡಿತ ಕಾರಣ ಅಲ್ಲ, ಮೈ ತುಂಬಾ ಬಟ್ಟೆ ಹಾಕಿದರೂ, ಹಾಕದೆ ಇದ್ದರೂ ಅತ್ಯಾಚಾರ ನಡೆಯುತ್ತಲೇ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಕೆಲವು ಪುರುಷರಲ್ಲಿರುವ ರೇಪಿಸ್ಟ್ ಮನಸ್ಥಿತಿ.
ಹೆಣ್ಣುಮಕ್ಕಳ ಅತ್ಯಾಚಾರ ಕಡಿಮೆಯಾಗಬೇಕಾದರೆ ಮೊದಲು ಪುರುಷರು ಬದಲಾಗಬೇಕು.

ಹೆಣ್ಣುಮಕ್ಕಳಿಗೆ ನಿಜವಾದ ರಕ್ಷಣೆ ನೀಡುವುದು ಶಿಕ್ಷಣ ಮಾತ್ರ ಎಂದು ನನ್ನ ಅಭಿಪ್ರಾಯ. ಹಿಜಾಬ್ – ಬುರ್ಖಾ ಧರಿಸಿಯಾದರೂ ಒಮ್ಮೆ ಅವರು ಶಿಕ್ಷಣ ಪಡೆಯಲಿ. ಆ ಶಿಕ್ಷಣದ ಬಲದಿಂದ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು

ಶಿಕ್ಷಣಕ್ಕಿಂತ ಶಕ್ತಿಯುತವಾದ ಅಸ್ತ್ರ ಬೇರೆ ಇಲ್ಲ. ಆದ್ದರಿಂದ ಹಿಜಾಬ್ -ಬುರ್ಖಾದ ಕಾರಣ ನೀಡಿ ದಯವಿಟ್ಟು ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಬೇಡಿ ಎಂದು ನಾನು ಸರ್ಕಾರವನ್ನು ಮತ್ತು ಸಮಾಜವನ್ನು ಕೈಮುಗಿದು ಬೇಡಿಕೊಳ್ಳುತ್ತೇನೆ

Share Post