Districts

ಮದ್ಯ ತುಂಬಿದ್ದ ಬಾಕ್ಸ್‌ಗೆ ಬೆಂಕಿ ಇಟ್ಟ ಯುವಕರು

ಹಾಸನ : ಸಕಲೇಶಪುರ ತಾಲ್ಲೂಕಿನ ಬ್ಯಾಡರಜಗಲಿ ಗ್ರಾಮದಲ್ಲಿ ಯುವಕರೇ ಅಕ್ರಮ ಮದ್ಯವನ್ನು ತಡೆಹಿಡಿದು ರಸ್ತೆ ಮಧ್ಯೆಯೇ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ವಾರಗಳ ಹಿಂದೆ ಬ್ಯಾಡರಜಗಲಿ ಗ್ರಾಮದ ಚನ್ನಯ್ಯ ಅವರ ಪತ್ನಿ ಮದ್ಯ ಸೇವನೆಯಿಂದ ಪ್ರಾಣ ಬಿಟ್ಟಿದ್ದರು. ಇದರಿಂದ ಆಕ್ರೋಶಭರಿತರಾಗಿದ್ದ ಗ್ರಾಮದ ಯುವಕರು, ಗ್ರಾಮದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲು ನಿರ್ಧರಿಸಿದ್ದರು. ಈ ಕಾರಣದಿಂದ ಮದ್ಯ ಮಾರಾಟ ಮಾಡುತ್ತಿದ್ದ ಬೈರಯ್ಯ ಹಾಗೂ ಮುತ್ತಣ್ಣ ಅವರನ್ನು ಕರೆಸಿ ಮದ್ಯ ಮಾರಾಟ ನಡೆಸದಂತೆ ಹೇಳಿದ್ದರು. ಅವರು ಕೂಡ ಮದ್ಯ ಮಾರಾಟ ನಿಲ್ಲಿಸುವುದಾಗಿ ಭರವಸೆ ನೀಡಿದ್ದರು.

ಮಂಗಳವಾರ ರಾತ್ರಿ ವ್ಯಕ್ತಿ ಒಬ್ಬ ಒರಿಜಿನಲ್‌ ಚಾಯ್ಸ್‌ ಎಣ್ಣೆಯ ಬಾಕ್ಸ್‌ ಅನ್ನು ಮುತ್ತಣ್ಣ ಅವರ ಮನೆಗೆ ತಲುಪಿಸಿ ಹೊರಡುವಾಗ ಹುಡುಗರು ಮುತ್ತಿಗೆ ಹಾಕಿ ಮದ್ಯ ವಶಪಡಿಸಿಕೊಂಡಿದ್ದಾರೆ. ನಂತರ ರಸ್ತೆಯಲ್ಲೇ ಬೆಂಕಿ ಹಚ್ಚಿ ಮದ್ಯವನ್ನು ಸುಟ್ಟಿದ್ದಾರೆ.

ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಇರುವ ಕಾರಣ ಈ ನಿರ್ಧಾರ ಮಾಡಿದ್ದಾರಂತೆ ಯುವಕರು.

Share Post