CrimeDistricts

ವಿಧಾನಪರಿಷತ್‌ ಚುನಾವಣೆ; ವಿಜಯಪುರದಲ್ಲಿ 17.40 ಲಕ್ಷ ನಗದು ವಶ

ವಿಜಯಪುರ; ವಾಯವ್ಯ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಮತದಾರರಿಗೆ ಹಂಚಲು ಕಾರಿನಲ್ಲಿ ಕೊಂಡೊಯ್ಯತ್ತಿದ್ದ 17.40 ಲಕ್ಷ ರೂಪಾಯಿ ನಗದನ್ನು ವಿಜಯಪುರದ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಚುನಾವಣಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಭಾನುವಾರ ಸಂಜೆ ಈ ದಾಳಿ ನಡೆಸಲಾಗಿದ್ದು, ಕ್ರಮ ತೆಗೆದುಕೊಳ್ಳಬೇಕೆಂದು ಬಿಜೆಪಿ ಆಗ್ರಹಿಸಿದೆ.

ವಾಯವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಬೆಂಬಲಿಗ ಬಾಬಸಾಹೇಬ ಖೋತ್ ಸೇರಿದಂತೆ ಆರು ಜನರು ಈ ಹಣವನ್ನು ಸಾಗಿಸುತ್ತಿದ್ದರು. ಮಹಾರಾಷ್ಟ್ರ ನೋಂದಣಿ ಹೊಂದಿರುವ ಕಾರಿನಲ್ಲಿ 10 ಸಾವಿರದಂತೆ 174 ಕಟ್ಟುಗಳ ಹಣದ ಜೊತೆಗೆ ಪ್ರಕಾಶ ಹುಕ್ಕೇರಿ ಅವರ ಬ್ಯಾಲೆಟ್ ಪೇಪರ್ ಮಾದರಿ ಕರಪತ್ರವನ್ನು ಇರಿಸಿ ಕೊಂಡೊಯ್ಯಲಾಗುತ್ತಿತ್ತು. ಮತದಾರರಿಗೆ ಹಂಚಲೆಂದೇ ಈ ಹಣ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಾಯವ್ಯ ಶಿಕ್ಷಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಪೂರ, ಬಿಜೆಪಿ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮತ್ತಿತರರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ, ಹಣ ಹಂಚುವ ಮೂಲಕ ಚುನಾವಣಾ ಅಕ್ರಮ ಎಸಗಿರುವ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.

Share Post