CrimeDistricts

ಸಾಕು ನಾಯಿ ಬೊಗಳಿತೆಂದು ಮಾಲೀಕನಿಗೆ ಚಾಕು ಇರಿತ

ಚಿಕ್ಕಬಳ್ಳಾಪುರ; ದೊಡ್ಡ ವಿಚಾರಗಳಿಗಿಂತ ಸಣ್ಣ ಸಣ್ಣ ವಿಷಯಗಳೇ ದೊಡ್ಡ ಜಗಳಗಳಿಗೆ ಸಾಕ್ಷಿಯಾಗುತ್ತಿವೆ. ಬರೀ ಸಾಕುನಾಯಿ ಬೊಗಳಿದ್ದಕ್ಕೆ ಇಲ್ಲೊಂದು ದೊಡ್ಡ ರಾದ್ಧಾಂತವಾಗಿದೆ. ದುಷ್ಕರ್ಮಿಗಳು ಸಾಕು ನಾಯಿ ಬೊಗಳಿತು ಅನ್ನೋ ಕಾರಣಕ್ಕೆ ಅದರ ಮಾಲೀಕನಿಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಚಾಕು ಮುರಿದಿದ್ದು, ಅದರ ತುದಿ ನಾಯಿ ಮಾಲೀಕನ ದೇಹದಲ್ಲೇ ಉಳಿದಿದೆ.

ದೇವನಹಳ್ಳಿ ಬಳಿಯ ದೊಡ್ಡ ಚೀಮನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. 34 ವರ್ಷದ ಮಧುಕುಮಾರ್‌ ಎಂಬುವವರೇ ಚಾಕು ಇರಿತಕ್ಕೊಳಗಾದವರು. ದೇಹದಲ್ಲೇ ಚಾಕು ತುದಿ ಉಳಿದಿರುವುದರಿಂದ ಅದನ್ನು ಆಪರೇಷನ್‌ ಮಾಡಿ ತೆಗೆಯಲಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಚೀಮನಹಳ್ಳಿ ಗ್ರಾಮದ ಸುನೀಲ್‌, ಅನಿಲ್‌, ದೇವರಾಜ್‌ ಹಾಗೂ ಅಜಯ್‌ ಎಂಬುವವರು ನಿಮ್ಮ ನಾಯಿ ನಮ್ಮನ್ನು ನೋಡಿ ಬೊಗಳುತ್ತಿದೆ ಎಂದು ಜಗಳ ತೆಗೆದಿದ್ದಾರೆ. ಈ ವೇಳೆ ಜಗಳ ತಾರಕಕ್ಕೇರಿದ್ದು, ದುಷ್ಕರ್ಮಿಗಳು ಮಧುಕುಮಾರ್‌ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಇದೇ ವೇಳೆ ಮಧುಕುಮಾರ್‌ ಪತ್ನಿ ಮಮತಾ ಮೇಲೂ ಹಲ್ಲೆ ಮಾಡಿದ್ದಾರೆಂದು ತಿಳಿದುಬಂದಿದೆ.

ಈ ಸಂಬಂಧ ವಿಶ್ವನಾಥಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post