DistrictsPolitics

ಮಧು ಬಂಗಾರಪ್ಪ ಮೂಲಕ ಸಿದ್ದರಾಮಯ್ಯರಿಂದ ಈಡಿಗ ಸಮುದಾಯ ಒಡೆಯುವ ಯತ್ನ; ಪ್ರಣವಾನಂದ ಸ್ವಾಮೀಜಿ

ಕೊಪ್ಪಳ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಡಿಗ ಸಮುದಾಯವನ್ನು ಒಡೆಯುವ ಯತ್ನ ಮಾಡುತ್ತಿದ್ದಾರೆ ಎಂದು ಈಡಿಗ ಸಮುದಾಯದ ಶ್ರೀಗಳಲ್ಲಿ ಒಬ್ಬರಾದ ಪ್ರಣವಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಗಂಗಾವತಿಯಲ್ಲಿ ಮಾತನಾಡಿರುವ ಅವರು, ಮಧು ಬಂಗಾರಪ್ಪ ಅವರನ್ನು ಮುಂದಿಟ್ಟುಕೊಂಡು ಒಗ್ಗಟ್ಟಿನಿಂದ ಇದ್ದ ಈಡಿಗ ಸಮುದಾಯವನ್ನು ಒಡೆಯುವ ಯತ್ನ ಮಾಡಲಾಗುತ್ತಿದೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ಸಮಾವೇಶ ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಸೂಚನೆಯಂತೆ ಬೆಂಗಳೂರಿನಲ್ಲಿ ಭಾನುವಾರ ಈಡಿಗರ ಸಮಾವೇಶ ನಡೆಸಲಾಗುತ್ತಿದೆ. ಇದರಿಂದ ಸಮುದಾಯದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಅವರನ್ನು ಮೂಲೆಗುಂಪು ಮಾಡಲಾಗಿದೆ. ಇದು ಬೇಕಂತಲೇ ಮಾಡುತ್ತಿದ್ದು, ಸಮಾಜವನ್ನು ಒಡೆಯುವ ತಂತ್ರವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ಭಾನುವಾರ ನಡೆಯುವ ಸಮಾವೇಶಕ್ಕೆ ಈಡಿಗ ಸಮುದಾಯದ ಸಾಕಷ್ಟು ಜನ ಸ್ಪಂದಿಸುತ್ತಿಲ್ಲ. ಲಿಂಗಾಯತ ಸಮಾಜ ಒಡೆದ ಸಿದ್ದರಾಮಯ್ಯ ಈಡಿಗ ಸಮಾಜವನ್ನೂ ಇಬ್ಭಾಗ ಮಾಡಲು ಹೊರಟಿದ್ದಾರೆ. ಮನೆ ಒಡೆದ ಮಧುಬಂಗಾರಪ್ಪಗೆ ಸಮಾಜ ಒಡೆಯುವುದು ದೊಡ್ಡದಲ್ಲ ಎಂದೂ ಪ್ರಣವಾವಂದ ಸ್ವಾಮೀಜಿ ಕಿಡಿಕಾರಿದ್ದಾರೆ.

 

Share Post