CrimeDistrictsHealth

ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾದ ಮುರುಘಾ ಮಠದ ಶಿವಮೂರ್ತಿ ಶರಣರು

ಶಿವಮೊಗ್ಗ; ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಹೃದಯ ತಪಾಸಣೆಗಾಗಿ ಕಳೆದ ರಾತ್ರಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಕರೆತರಲಾಗಿದ್ದು, ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಲ್ಲಿನ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಪೊಲೀಸ್ ವಾಹನದಲ್ಲಿ ಆರೋಪಿಯನ್ನು ಕರೆತಂದ ಬಳಿಕ ಮುಖ್ಯ ಅಧೀಕ್ಷಕಿ ಸಿ.ಎಸ್.ಅನಿತಾ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಕಾರಾಗೃಹದ ಸುಪರ್ದಿಗೆ ಪಡೆದರು. ವೈದ್ಯರ ಶಿಫಾರಸ್ಸಿನಂತೆ ಅವರನ್ನು ಹೃದಯ ತಪಾಸಣೆಗೆ ಮೆಗ್ಗಾನ್‌ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

‘ಮುರುಘಾ ಶರಣರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಯ ವೈದ್ಯರನ್ನು ಒಳಗೊಂಡ ತಂಡ ರಚಿಸಲಾಗಿದೆ. ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಪರಮೇಶ್ವರಪ್ಪ ತಂಡದ ನೇತೃತ್ವ ವಹಿಸಿದ್ದಾರೆ’ ಎಂದು ಶಿವಮೊಗ್ಗ ವೈದ್ಯಕೀಯ ಶಿಕ್ಷಣ ಸಂಸ್ಥೆ (ಸಿಮ್ಸ್) ಮುಖ್ಯಸ್ಥ ಡಾ.ವಿ.ವಿರೂಪಾಕ್ಷಪ್ಪ ತಿಳಿಸಿದ್ದಾರೆ.

Share Post