CrimeDistricts

ಸ್ನೇಹಿತನನ್ನು ಜೀವಂತವಾಗಿ ಹೂತುಹಾಕಿದ ಇಬ್ಬರು ಯುವಕರು; ಮೈಸೂರು ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ..!

ಮೈಸೂರು: ಬದುಕಿದ್ದ ವ್ಯಕ್ತಿಯನ್ನು ಸ್ನೇಹಿತರೇ ಜೆಸಿಬಿಯಿಂದ ಗುಂಡಿ ತೆಗೆದು ಹೂತುಹಾಕಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ಬಳಿಯ ಹಣಗೋಡಿನಲ್ಲಿ ನಡೆದಿದೆ. ಪಾರ್ಟಿ ಮಾಡಲೆಂದು ಕರೆಸಿಕೊಂಡು, ಚೆನ್ನಾಗಿ ಕುಡಿದ ನಂತರ ಇಬ್ಬರು ವ್ಯಕ್ತಿಗಳು ಸೇರಿ ಸ್ನೇಹಿತನನ್ನೇ ಜೀವಂತವಾಗಿ ಸಮಾಧಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹನಗೋಡು ಗ್ರಾಮದ 33 ವರ್ಷದ ಕೃಷ್ಣ ಕೊಲೆಯಾದ ವ್ಯಕ್ತಿ. ಮೂರು ದಿನದ ಹಿಂದೆ ಕೃಷ್ಣನಿಗೆ ಆತನ ಸ್ನೇಹಿತರಾದ ಗೋಪಾಲ ಮತ್ತು ಅಶೋಕ ಕರೆ ಮಾಡಿ ಹೊಸೂರಿನ ಮಾರಮ್ಮನ ದೇವಸ್ಥಾನದ ಬಳಿ ಬರುವಂತೆ ತಿಳಿಸಿದ್ದಾರೆ. ಆತ ಅಲ್ಲಿಗೆ ಹೋದಾಗ ಮೂವರು ಮದ್ಯಪಾನ ಮಾಡಿದ್ದಾರೆ. ಈ ವೇಳೆ ಮೂವರ ನಡುವೆ ಜಗಳವಾಗಿದೆ. ಇದೇ ವೇಳೆ ಅಶೋಕ ಮತ್ತು ಗೋಪಾಲ ಸೇರಿ ಕೃಷ್ಣನ ಮೇಲೆ ಹಲ್ಲೆ ನಡೆಸಿದ್ದಾರೆ. ಇದ್ರಿಂದ ಅಸ್ವಸ್ಥನಾಗಿದ್ದ ಕೃಷ್ಣನನ್ನು ಜೆಸಿಬಿಯಿಂದ ಗುಂಡಿ ತೋಡಿ ಹೂತುಹಾಕಿದ್ದಾರೆ. ಮರುದಿನವಾದರೂ ಪತಿ ಮನೆಗೆ ಬಾರದೇ ಇದ್ದುದರಿಂದ ಕೃಷ್ಣನ ಹೆಂಡತಿ ಮಲ್ಲಿಗೆ, ಕೃಷ್ಣನ ಸ್ನೇಹಿತರಾದ ಅಶೋಕ ಹಾಗೂ ಗೋಪಾಲನ ಬಳಿ ಧಾವಿಸಿ ವಿಚಾರಿಸಿದ್ದಾರೆ. ರಾತ್ರಿಯೇ ಆತ ಮನೆಗೆ ಹೋಗುತ್ತೇನೆಂದು ಹೇಳಿ ಹೋಗಿದ್ದಾನೆಂದು ಅಶೋಕ ಮತ್ತು ಗೋಪಾಲ ತಿಳಿಸಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಕೃಷ್ಣನ ಹೆಂಡತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ನಾಪತ್ತೆಯಾಗಿದ್ದ ಆರೋಪಿಗಳಾದ ಗೋಪಾಲ ಹಾಗೂ ಅಶೋಕನನ್ನು ಮಂಡ್ಯ ಬಳಿ ಪೊಲೀಸರು ಬಂಧಿಸಿದ್ದೂ, ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರು ತೋರಿಸಿದ ಸ್ಥಳದಲ್ಲಿ ಮಣ್ಣು ಅಗೆದಾಗ ಕೃಷ್ಣನ ಮೃತದೇಹ ಪತ್ತೆಯಾಗಿದೆ.

Share Post