Districts

ಕೊರೊನಾಗೆ ಸ್ನೇಹಿತ ಬಲಿ; ಸ್ನೇಹಿತನ ಪತ್ನಿಗೆ ಬಾಳು ಕೊಟ್ಟ ಯುವಕ

ಚಾಮರಾಜನಗರ: ಗೆಳೆತನಕ್ಕಿಂತ ಮಿಗಿಲಾದ ಸಂಬಂಧ ಮತ್ತೊಂದಿಲ್ಲ ಅಂತಾರೆ. ಅದಕ್ಕೊಂದು ಉದಾಹರಣೆ ಚಾಮರಾಜನಗರದಲ್ಲಿ ನಡೆದ ಒಂದು ಮದುವೆ. ಯುವಕನೊಬ್ಬನ ಗೆಳೆಯ ಕೊರೊನಾಗೆ ಬಲಿಯಾಗಿದ್ದು, ಇದರಿಂದ ಆತನ ಪತ್ನಿ ಅನಾಥಳಾಗಿದ್ದಳು. ಹೀಗಾಗಿ, ಆ ಯುವಕ ತನ್ನ ಗೆಳೆಯ ಪತ್ನಿಯನ್ನು ಮದುವೆಯಾಗುವ ಮೂಲಕ ಆಕೆಗೆ ಬಾಳು ಕೊಟ್ಟಿದ್ದಾನೆ.

     ಚಾಮರಾಜನಗರ ತಾಲ್ಲೂಕಿನ ನಂಜದೇವನಪುರ ಗ್ರಾಮದ ಲೋಕೇಶ್‌ ಅವರೇ ತನ್ನ ಗೆಳೆಯನ ಪತ್ನಿಯನ್ನು ಮದುವೆಯಾದ ಯುವಕ. ಲೋಕೇಶ್‌ ಹಾಗೂ ಅಂಬಿಕಾ ಬೆಂಗಳೂರಿನ ಸರ್ಪಭೂಷಣ ಮಠದಲ್ಲಿ ಇತ್ತೀಚೆಗೆ ಮದುವೆಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಹನೂರಿನ ಅಂಬಿಕಾ ಕಳೆದ ಎಂಟು ವರ್ಷಗಳ ಹಿಂದೆ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದ ಚೇತನ್‌ ಕುಮಾರ್‌ ಅವರನ್ನು ಮದುವೆಯಾಗಿದ್ದರು. ಚೇತನ್‌ ಬೆಂಗಳೂರಿನಲ್ಲಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸದಲ್ಲಿದ್ದರು. ಆದ್ರೆ ಕೊವಿಡ್‌ ಎರಡನೇ ಅಲೆಯಲ್ಲಿ ಚೇತನ್‌ಗೆ ಕೊರೊನಾ ವಕ್ಕರಿಸಿದ್ದು, ಸೂಕ್ತ ಚಿಕಿತ್ಸೆ ದೊರೆಯದೆ ಆತ ಮೃತಪಟ್ಟಿದ್ದ. ಇದರಿಂದಾಗಿ ಅಂಬಿಕಾ ಗಂಡನನ್ನ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು. ಆ ಆಸರೆಗೆ ಬಂದವರೇ ಲೋಕೇಶ್‌. ಎರಡೂ ಮನೆಯವರನ್ನೂ ಒಪ್ಪಿಸಿದ ಲೋಕೇಶ್‌, ಅಂಬಿಕಾರನ್ನು ಮದುವೆಯಾಗಿದ್ದಾರೆ.

Share Post