DistrictsPolitics

ಜೆಡಿಎಸ್‌ ವಿರುದ್ಧ ಹರಿಹಾಯ್ದ ಮಂಡ್ಯ ಸಂಸದೆ ಸುಮಲತಾ

ಮಂಡ್ಯ; ಇನ್ನು ಸಂಸದೆ ಸುಮಲತಾ ಅವರು ಜೆಡಿಎಸ್‌ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಏನೂ ಮಾಡಿಯೇ ಇಲ್ಲ ಎಂದು ಪ್ರಚಾರ ನಡೆಸಲಾಗುತ್ತಿದೆ. ಆದ್ರೆ ನಾನು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿಸಿದ್ದೇನೆ. ಕೋಟಿಗಟ್ಟಲೆ ಹಣ ತಂದು ಅಭಿವೃದ್ಧಿ ಮಾಡಿದ್ದೇವೆ. ಕಾಡಿಬೇಡಿ ಫಂಡ್‌ಗಳನ್ನು ತಂದು ಕೆಲಸ ಮಾಡಿಸಿದ್ದೇನೆ. ನಾನು ರಾಜಕಾರಣ ಬಿಡುತ್ತೇನೆ, ಆದ್ರೆ ಸ್ವಾಭಿಮಾನ ಬಿಡೋದಿಲ್ಲ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷಗಳಲ್ಲಿ ಒಬ್ಬಂಟಿಯಾಗಿ ಹೋರಾಟ ಮಾಡಿದ್ದೇನೆ. ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ನಾನು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಪ್ರಚಾರ ಮಾಡಲಾಗಿದೆ. ಆದ್ರೆ ನಾನು ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ . ಅದರ ಲಿಸ್ಟ್‌ ನನ್ನ ಕೈನಲ್ಲೇ ಇದೆ ಎಂದು ಸುಮಲತಾ ಹೇಳಿದ್ದಾರೆ. ಕೊವಿಡ್‌ ಸಮಯದಲ್ಲಿ ದಿಶಾ ಸಭೆಗಳನ್ನು ನಡೆಸಿದ್ದೇವೆ. ಈ ಮೂಲಕ ಕೊರೊನಾ ಎದುರಿಸಲು ಸಕಲ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದೇನೆ. ಸಿಎಂ ರಿಲೀಫ್‌ ಫಂಡ್‌ಗೆ ಮೊದಲು ವೇತನ ಕೊಟ್ಟಿದ್ದೇ ನಾನು. ಜಲಧಾರೆ, ರಸ್ತೆ, ಕೇಂದ್ರೀಯ ವಿದ್ಯಾಲಯ ಅಭಿವೃದ್ಧಿ ಮಾಡಿದ್ದೇನೆ. ನನ್ನ ವೈಯಕ್ತಿಕ ವೆಚ್ಚದಲ್ಲಿ ಅತ್ಯಾಧುನಿಕ ಆಂಬುಲೆನ್ಸ್‌ ನೀಡಿದ್ದೇನೆ ಎಂದು ಸಮುಲತಾ ಅಭಿವೃದ್ಧಿ ವಿಚಾರಗಳ ಪಟ್ಟಿಯನ್ನೇ ಬಿಚ್ಚಿಟ್ಟಿದ್ದಾರೆ.

ಇನ್ನು ಜೆಡಿಎಸ್‌ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿರುವ ಸುಮಲತಾ ಅವರು, ಮಂಡ್ಯ ಭದ್ರಕೋಟೆ ಎಂದು ಹೇಳುತ್ತೀರಿ. ಮಂಡ್ಯಗಾಗಿ ನೀವು ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ನೀವೂ ಅಧಿಕಾರದಲ್ಲಿದ್ದಿರಿ. ಆಗ ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು ಎಂದು ಹೆಚ್ಡಿಕೆಗೆ ಸುಮಲತಾ ಪ್ರಶ್ನೆ ಮಾಡಿದ್ದಾರೆ. ಬರೀ ಚುನಾವಣಾ ಭಾಷಣಗಳೇ ರಾಜಕಾರಣವಾ..? ಮಂಡ್ಯವನ್ನು ಏನು ಉದ್ಧಾರ ಮಾಡಿದ್ದೀರಾ ನೀವು..? ಎಂದು ಖಾರವಾಗಿಯೇ ಪ್ರಶ್ನೆ ಮಾಡಿದ್ದಾರೆ.

Share Post