CrimeDistricts

ಶಾಲೆ ಮುಂದೆ ಬಿಯರ್‌ ಬಾಟಲ್‌ ಎಸೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊಲೆ!

ಮಂಗಳೂರು; ಕ್ಷುಲ್ಲಕ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಯೊಂದು ನಡೆದಿದೆ. ಯುವಕನೊಬ್ಬ ಶಾಲೆಯ ಮುಂದೆ ಬಿಯರ್‌ ಬಾಟಲ್‌ ಎಸೆದಿದ್ದಾನೆ. ಇದನ್ನು ಮಂಗಳೂರು ಮೂಡಾದ ಕಮೀಷನರ್ ವಾಹನದ ಚಾಲಕ ವರುಣ್‌ ಎಂಬಾತ ಪ್ರಶ್ನೆ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಆರೋಪಿಗಳು, ವರುಣ್‌ನನ್ನು ಕೊಲೆಗೈದಿದ್ದಾನೆ. ಉಳ್ಳಾಲದ ಕೊಲ್ಯ ಸಾರಸ್ವತ ಕಾಲನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ಈ ದುರ್ಘಟನೆ ನಡೆದಿದೆ.

ಸೂರಜ್ ಮತ್ತು ರವಿರಾಜ್ ಎಂಬುವವರಿಂದ ಈ ಕೃತ್ಯ ಎಸಗಲಾಗಿದೆ. ಕಳೆದ ಮಧ್ಯರಾತ್ರಿ ಶಾಲೆ ಎದುರು ಕಟ್ಟೆಯೊಂದರಲ್ಲಿ ಕುಳಿತು ಬಿಯರ್ ಕುಡಿದಿದ್ದ ಆರೋಪಿಗಳು, ಖಾಲಿ ಬಾಟಲ್‌ನ್ನು ಶಾಲೆ ಎದುರಿನ ರಸ್ತೆಗೆ ಎಸೆದಿದ್ದಾರೆ. ಈ ವೇಳೆ ಅಲ್ಲೇ ಇದ್ದ ವರುಣ್​ ಮತ್ತು ಆತನ ಸ್ನೇಹಿತ ಅಕ್ಷಯ್, ಹಾಗೆ ಶಾಲೆಯ ಮುಂದೆ ಬಿಯರ್‌ ಬಾಟಲ್‌ ಹಾಕಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಇಬ್ಬರ ನಡುವೆ ವಾಗ್ವಾದ ಆಗಿದೆ. ಈ ವೇಳೆ ಆರೋಪಿ ಸೂರಜ್‌ ಎಂಬಾತ ವರುಣ್‌ ಬೆನ್ನಿಗೆ ಹರಿತವಾದ ಆಯುಧದಿಂದ ಇರಿದಿದ್ದಾನೆ.  ಗಂಭೀರ ಗಾಯಗೊಂಡಿದ್ದ ವರುಣ್​ ರಕ್ತದ ಮಡುವಿನಲ್ಲೇ​ ಸಮೀಪದ ತನ್ನ ಮನೆಗೆ ಬಂದಿದ್ದಾನೆ. ನಂತರ ಆತನನ್ನು ಕೂಡಲೇ ದೇರಳೆಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಆಸ್ಪತ್ರೆಯಲ್ಲೇ ಆತ ಕೊನೆಯುಸಿರೆಳೆದಿದ್ದಾನೆ.

ಆರೋಪಿಗಳು ಅದೇ ಸಾರಸ್ವತ ಕಾಲೊನಿ ನಿವಾಸಿಗಳೆಂದು ತಿಳಿದುಬಂದಿದೆ.  ಆರೋಪಿ ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯನಾಗಿದ್ದನು. ಸೂರಜ್​ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದನು ಎನ್ನಲಾಗಿದೆ. ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

 

Share Post