Districts

ಅರ್ಚಕನ ಜೊತೆ ಗೃಹಿಣಿ ಲವ್ವಿಡವ್ವಿ; ನಡುನೀರಿನಲ್ಲಿ ಬಿಟ್ಟುಹೋದ ಪ್ರಿಯಕರ

ಮೈಸೂರು‌; ಎರಡು ಮಕ್ಕಳಿರುವ ಮಹಿಳೆಯ ಜೊತೆ ಪ್ರೀತಿಯ ನಾಟಕವಾಡಿರುವ 21 ವರ್ಷದ ಅರ್ಚಕನೊಬ್ಬ ಆಕೆಯೊಂದಿಗೆ ಹಲವು ದಿನ ಸುತ್ತಾಡಿ ಕೊನೆಗೆ ನಡುನೀರಿನಲ್ಲಿ ಬಿಟ್ಟುಹೋಗಿದ್ದಾರೆ. ಈ ಘಟನೆ ನಡೆದಿರೋದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕೊಲ್ಲೂಪುರ ಗ್ರಾಮದಲ್ಲಿ. 

ಮಹದೇಶ್ವರ ದೇವಸ್ಥಾನದಲ್ಲಿ 35 ವರ್ಷದ ಗೃಹಿಣಿಯೊಬ್ಬಳು ಶಾಸ್ತ್ರ ಕೇಳಲು ಹೋಗಿದ್ದಳು. ಈ ವೇಳೆ ಆ ಮಹಿಳೆಗೆ 21 ವರ್ಷ ವಯಸ್ಸಿನ ಅರ್ಚಕ ಸಂತೋಷ್​ ಎಂಬಾತನ ಪರಿಚಯವಾಗಿತ್ತು. ಆ ಪರಿಚಯ ಇಬ್ಬರ ನಡುವೆ ಸಲುಗೆ ಬೆಳೆಯಲು ಕಾರಣವಾಗಿದೆ. ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ನಿನಗೆ ಬಾಳು ಕೊಡುತ್ತೇನೆಂದು ನಂಬಿಸಿ ಅರ್ಚಕ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಈತನ ಮಾತಿಗೆ ಮರುಳಾದ ಮಹಿಳೆ, ಗಂಡ-ಮಕ್ಕಳನ್ನು ಬಿಟ್ಟು ಜೂ.12ರಂದು ತವರು ಮನೆಯಿಂದ ನಾಪತ್ತೆಯಾಗಿದ್ದಳು.

ಒಂದು ಕಡೆ ನಾಪತ್ತೆಯಾದ ಮಹಿಳೆಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು. ಇತ್ತ ಆರೋಪಿ ಸಂತೋಷ್ ಮದ್ವೆ ಆಗ್ತೀನಿ ಅಂತ ಆಸೆ ಹುಟ್ಟಿಸಿ ಆಕೆಯೊಂದಿಗೆ  ದೇಗುಲ ಮತ್ತು ನಿರ್ಜನ ಪ್ರದೇಶದಲ್ಲಿ ಸುತ್ತಾಡಿಸಿದ್ದ. 10 ದಿನ ಒಟ್ಟಿಗೆ ಇದ್ದರು. ನಿನ್ನೆ ಅದೇನಾಯಿತೋ ಆತ ವರಸೆ ಬದಲಿಸಿದ್ದಾನೆ. ಮದ್ವೆ ಆಗೋಕೆ ಮನೆಯಲ್ಲಿ ಒಪ್ಪಲ್ಲ ಎಂದು ಉಲ್ಟಾ ಹೊಡೆದಿದ್ದಾನೆ.  ಕೊನೆಗೆ ಇಬ್ಬರೂ ಸಾವಲ್ಲಿ ಒಂದಾಗೋಣ, ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ.

ರಾತ್ರಿ 12 ಗಂಟೆ ಸುಮಾರಿಗೆ ಇಲ್ಲೇ ಇರುವ ಬರ್ತೀನಿ ಒಂದೈದು ನಿಮಿಷ ಅಂತ ಹೋದ ಸಂತೋಷ್‌​ ವಾಪಸ್​ ಬಂದಿಲ್ಲ. ಕಗ್ಗತ್ತಲಲ್ಲಿ ರಾತ್ರಿಯಿಡೀ ಕಾಡಿನಲ್ಲೇ ಕಳೆದ ಮಹಿಳೆ, ಬೆಳಗಿನ ಜಾನ ನಡೆದುಕೊಂಡು ಒಂದು ಹಳ್ಳಿಯ ಬಳಿ ಬಂದಿದ್ದಾರೆ. ಈ ವೇಳೆ ಸ್ಥಳೀಯರೊಂದಿಗೆ ಆಕೆ ಗೋಳು ಹಂಚಿಕೊಂಡಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಸಂತೋಷ್‌ ಸದ್ಯ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Share Post