CrimeDistricts

ಹಾಸನ ಮಿಕ್ಸಿ ಬ್ಲಾಸ್ಟ್‌ ಪ್ರಕರಣಕ್ಕೆ ಟ್ವಿಸ್ಟ್;‌ ಆಕೆ, ಆತ ಮತ್ತು ಮ್ಯಾರೇಜ್‌ ಬ್ಯೂರೋ

ಹಾಸನ; ಹಾಸನ ನಗರದಲ್ಲಿ ಮೊನ್ನೆ ಸಂಜೆ ಕೊರಿಯರ್ ಅಂಗಡಿಯಲ್ಲಿ ನಡೆದಿದ್ದ ಮಿಕ್ಸಿ ಸ್ಪೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬ್ಲಾಸ್ಟ್ ಹಿಂದೆ ವಿಚ್ಛೇದಿತ ಮಹಿಳೆ ಮದುವೆ ನಿರಾಕರಿಸಿದ್ದೇ ಪ್ರಮುಖ ಕಾರಣ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಮಿಕ್ಸಿಯನ್ನು ಪಕ್ಕಕ್ಕೆ ಎತ್ತಿ ಇಡಲು ಹೋದ ವೇಳೆ ಕೈಜಾರಿ ಮಿಕ್ಸಿ ಕೆಳಗೆ ಬಿದ್ದು ಬ್ಲಾಸ್ಟ್ ಆಗಿದ್ದು ತನ್ನದಲ್ಲದ ತಪ್ಪಿಗೆ ಕೊರಿಯರ್ ಅಂಗಡಿ ಮಾಲೀಕ ಶಶಿಕುಮಾರ್ ಬಲಗೈನ ಎರಡು ಬೆರಳು ಕಳೆದುಕೊಳ್ಳುವುದರ ಜೊತೆಗೆ ಗಾಯಗೊಂಡು ನೋವಿನಿಂದ ನರಳುವಂತಾಗಿದೆ. ಯಾರೋ ಮಾಡಿದ ತಪ್ಪಿಗೆ ನಾನು ನೋವು ಅನುಭವಿಸುವಂತಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಬೆಂಗಳೂರಿನ ಪೀಣ್ಯ ಶಾಖೆ, ನಾಗಸಂದ್ರದಿಂದ ಸಂಖ್ಯೆ AA-26753848 ರಲ್ಲಿ RASOIYA CLASSIC ಮಿಕ್ಸರ್ ಗ್ರೈಂಡರ್ ಹೆಸರಿನ ನಾಲ್ಕು ಕೆ.ಜಿ ತೂಕದ ಪಾರ್ಸೆಲ್ ಬಂದಿತ್ತು ಎಂದು ತನಿಖೆ ವೇಳೆ ಗೊತ್ತಾಗಿದೆ. ಇನ್ನು ಗಾಯಾಳು ಶಶಿಕುಮಾರ್ ಘಟನೆ ಬಗ್ಗೆ ವಿವರಿಸಿದ್ದಾರೆ.

ಹಾಸನದ 41 ವರ್ಷದ ಮಹಿಳೆ ಈ ಹಿಂದೆ ಮದುವೆಯಾಗಿ ಕೆಲವು ವರ್ಷಗಳ ಹಿಂದೆಯೇ ಮೊದಲ ಗಂಡನಿಂದ ಡೈವೋರ್ಸ್ ಪಡೆದಿದ್ದಳು. ನಂತರ ವರ ಬೇಕು ಎಂದು ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೋ ಅಪ್‌ಲೋಡ್ ಮಾಡಿದ್ದಳು. ಇದನ್ನು ಗಮನಿಸಿದ ಮೂಲತಃ ಮಂಡ್ಯ ಜಿಲ್ಲೆಯ, ಹಾಲಿ ಬೆಂಗಳೂರಿನಲ್ಲಿ ವಾಸವಾಗಿರುವ ಸೈನಿಕನ ಮಗ ಅನೂಪ್‌ಕುಮಾರ್, ಈ ಮಹಿಳೆಯನ್ನು ಮೆಚ್ಚಿಕೊಂಡು ಮದುವೆ ಪ್ರಸ್ತಾಪವನ್ನೂ ಮುಂದಿಟ್ಟಿದ್ದ. ಇದಕ್ಕೆ ಓಕೆ ಎಂದ ಮಹಿಳೆ ಮತ್ತು ಅನೂಪ್‌ಕುಮಾರ್ ಬಹುಬೇಗ ಹತ್ತಿರವಾದರು. ಅನೇಕ ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಓಡಾಡಿದ್ದರು. ಈ ನಡುವೆ ವಸಂತ, ಅನೂಪ್ ಕುಮಾರ್‌ನಿಂದ ಅನೇಕ ಕಾರಣ ನೀಡಿ ಲಕ್ಷಾಂತರ ರೂ. ಹಣವನ್ನು ವಸೂಲಿ ಮಾಡಿದ್ದಳು. ನಂತರದಲ್ಲಿ ಉಲ್ಟಾ ಹೊಡೆದ ವಸಂತ, ಮದುವೆಗೆ ನಿರಾಕರಿಸಿ ಬಿಟ್ಟಳು. ಇದರಿಂದ ತೀವ್ರ ನಿರಾಸೆಗೆ ಒಳಗಾದ ಅನೂಪ್, ತಾನು ನೀಡಿರುವ ಹಣವನ್ನು ವಾಪಸ್ ಕೇಳಿದಾಗ ಮಹಿಳೆ ಅದಕ್ಕೂ ಸ್ಪಂದಿಸಿರಲಿಲ್ಲ.

ಏತನ್ಮಧ್ಯೆ ಒಂದೆರಡು ಬಾರಿ ಹಾಸನಕ್ಕೂ ಬಂದಿದ್ದ ಅನೂಪ್, ಮಹಿಳೆ ಮನೆ ಎದುರು ಗಲಾಟೆ ಮಾಡಿದ್ದ. ಇದರ ವಿರುದ್ಧ ಪೊಲೀಸರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಮಹಿಳೆ ದೂರು ನೀಡಿದ್ದಳು. ಇದು ಅನೂಪ್‌ನಲ್ಲಿ ಅಕ್ಷರಶಃ ಕೆರಳಿಸಿತ್ತು. ಯಾವಾಗ ಅನೂಪ್ ಕಾಟ ಹೆಚ್ಚಾಯಿತೋ ಆಗ ಆತನ ನಂಬರ್‌ಗಳನ್ನು ಮಹಿಳೆ ಬ್ಲಾಕ್ ಮಾಡಿದ್ದಳು. ಆದರೂ ನನಗೆ ಮೋಸ ಮಾಡಿದವಳಿಗೆ ಒಂದು ಗತಿ ಕಾಣಿಸಲೇಬೇಕೆಂದು, ಅನೂಪ್ ಮೊದಲು ಸೀರೆ ಕೊರಿಯರ್ ಮಾಡಿದ್ದ. ನಂತರ ಸೀರಿಯಲ್ ಸೆಟ್ ಕಳುಹಿಸಿದ್ದ. ಮೂರನೇ ಬಾರಿಗೆ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ಕಳಿಸಿದ್ದ. ಆದರೆ ಮಹಿಳೆ ರಿಸೀವ್ ಮಾಡಿರಲಿಲ್ಲ. ಆಕೆ ಸತ್ತರೆ ಸಾಯಲಿ, ಇಲ್ಲ ಅಂದ್ರೆ ಮುಖ, ದೇಹದ ಭಾಗ ವಿಕಾರವಾಗಬೇಕು ಎಂಬುದು ಅನೂಪ್‌ನ ಉದ್ದೇಶವಾಗಿತ್ತು. ಡಿಟಿಡಿಸಿ ಕೊರಿಯರ್ ಅಂಗಡಿಯಿಂದ ಗಣೇಶ್ ಎಂಬಾತ ಡಿ.17 ರಂದು ಅದನ್ನು ಮಹಿಳೆ ಮನೆಗೆ ಡಿಲಿವರಿ ಮಾಡಿದ್ದ. ಡಿ.26 ರಂದು ಮೂರನೇ ಸಲ ಸಹ ಫ್ರಂ ಅಡ್ರೆಸ್ ಇಲ್ಲದೆ ಕಳುಹಿಸಿದ್ದ ಮಿಕ್ಸಿಯನ್ನು ವಾಪಸ್ ಕಳಿಸುವಂತೆ ಹಿಂದಿರುಗಿಸಿದ್ದಳು. ಇದಕ್ಕೆ 300 ರೂ ವೆಚ್ಚ ಆಗಲಿದೆ ಎಂದು ಅಂಗಡಿ ಮಾಲೀಕ ಶಶಿ ಹೇಳಿದ್ದ.

ಇಷ್ಟು ಹಣ ನನ್ನ ಬಳಿಯಿಲ್ಲ ಎಂದ ಮಹಿಳೆ, ಮಿಕ್ಸಿಯನ್ನು ಏನಾದರೂ ಮಾಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಳು. ಶಶಿ ತನ್ನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಅರ್ಜೆಂಟ್‌ನಲ್ಲಿ ಮಿಕ್ಸಿಯನ್ನು ಪಕ್ಕಕ್ಕೆ ಎತ್ತಿಡಲು ಮುಂದಾಗಿದ್ದಾರೆ. ಈ ವೇಳೆ ಮಿಕ್ಸಿ ಹಾಗೂ ಜಾರ್ ಕೈಜಾರಿ ಕೆಳಗೆ ಬಿದ್ದು ಸ್ಪೋಟಗೊಂಡಿದ್ದು ಶಶಿ ತೀವ್ರವಾಗಿ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಡಿ.17 ರಂದು ವಸಂತ ಎಂಬುವವರ ಹೆಸರಿಗೆ ಕೊರಿಯರ್ ಬಂದಿತ್ತು. ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಗಣೇಶ್ ಎನ್ನುವ ಯುವಕ ಅಂದೇ ಡಿಲವೆರಿ ಮಾಡಿದ್ದ. ಡಿ.26 ರಂದು ಪಾರ್ಸೆಲ್ ನನಗೆ ವಾಪಾಸ್ ಕಳಿಸುವಂತೆ ತಂದಿದ್ದರು. 300 ರೂಪಾಯಿ ಚಾರ್ಜ್ ಆಗುತ್ತದೆ ಎಂದಾಗ ನನಗೆ ಬೇಡ ನೀವೆ ಇಟ್ಟುಕೊಳ್ಳಿ ಇಲ್ಲಾ ಬಿಸಾಡಿ ಎಂದು ಆ ಮಹಿಳೆ ಹೇಳಿದ್ದರು. ಆ ಮಿಕ್ಸಿಯನ್ನು ಪಕ್ಕಕ್ಕೆ ತೆಗೆದಿಡಲು ಹೋದ ವೇಳೆ ಕೈಜಾರಿ ಕೆಳಗೆ ಬಿದ್ದ ವೇಳೆ ಸ್ಪೋಟಗೊಂಡಿದೆ. ನನ್ನ ತಂದೆ ಅನಾರೋಗ್ಯದಿಂದ ನರಳುತ್ತಿದ್ದಾರೆ. ನಿನ್ನೆ ನನಗೆ ಅವಳಿ ಜವಳಿ ಮಕ್ಕಳಾಗಿದ್ದು ನೋಡಲು ಸಾಧ್ಯವಾಗುತ್ತಿಲ್ಲ. ಇಬ್ಬರ ನಡುವಿನ ಜಗಳದಿಂದ ನಾನು ನೋವು ಅನುಭವಿಸುವಂತಾಗಿದೆ. ಇದರಲ್ಲಿ ಯಾರೇ ತಪ್ಪು ಮಾಡಿದ್ದರು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಶಶಿಕುಮಾರ್ ಒತ್ತಾಯಿಸಿದ್ದಾರೆ.

ಅನಾಮಧೇಯ ಹೆಸರಿನಲ್ಲಿ ಬಂದ ಎಲ್ಲಾ ಕೊರಿಯರ್ ಗಳನ್ನು ಮಹಿಳೆ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಮಿಕ್ಸಿ, ಗಿಫ್ಟ್ ಸೇರಿದಂತೆ ಬಂದ ಎಲ್ಲಾ ರೀತಿಯ ಕೊರಿಯರ್ ಗಳನ್ನು ಸ್ವೀಕರಿಸಿ, ಅದನ್ನ ಓಪನ್ ಮಾಡೋ ಮುನ್ನ ಮಹಿಳೆ ವಿಡಿಯೋ ರೆಕಾರ್ಡ ಮಾಡಿಕೊಂಡಿದ್ದಾರೆ. ಹತ್ತು ದಿನಗಳಿಂದ ಮನೆಯಲ್ಲೇ ಇಟ್ಟುಕೊಂಡಿದ್ದ ಪಾರ್ಸೆಲ್‌ನ್ನು ವಸಂತ ಮನೆಯಲ್ಲೇ ಓಪನ್ ಮಾಡಿದ್ದರೆ ಅಲ್ಲೇ ಅನಾಹುತ ನಡೆದು ಹೋಗುತ್ತಿತ್ತು. ಅನೂಪ್ ಕುಮಾರ್ ಮತ್ತು ಮಹಿಳೆಯನ್ನು ವಶಕ್ಕೆ ಪಡೆದಿರುವ ಬಡಾವಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಒಟ್ಟಿನಲ್ಲಿ ವಸಂತ-ಅನೂಪ್‌ಕುಮಾರ್ ನಡುವಿನ ಜಗಳದಿಂದ ಶಶಿಕುಮಾರ್ ಶಿಕ್ಷೆ ಅನುಭವಿಸುತ್ತಿದ್ದಾರೆ…..

Share Post