Districts

ಸಿದ್ದರಾಮಯ್ಯ ʼಗೊಬೆಲಪ್ಪʼ, ಬ್ರೋಕರಪ್ಪ-ಹೆಚ್.ಡಿ.ಕುಮಾರಸ್ವಾಮಿ

ಬೆಳಗಾವಿ: ಜೆಡಿಎಸ್ ಮುಳುಗುವ ಹಡುಗು ಎಂದು ಹೇಳಿಕೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಪ್ರತಿಪಕ್ಷ ನಾಯಕರನ್ನು ಹಿಟ್ಲರ್ ಅಸ್ಥಾನದಲ್ಲಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದ ಗೊಬೆಲ್ʼಗೆ ಹೋಲಿಕೆ ಮಾಡಿ ಟಾಂಗ್‌ ನೀಡಿದ್ದಾರೆ.
ಈ ಬಗ್ಗೆ ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಅವರ ಮೇಲೆ ಪ್ರಹಾರ ನಡೆಸಿರುವ ಅವರು, ಸಿದ್ದರಾಮಯ್ಯ ಅವರನ್ನು ʼಗೊಬೆಲಪ್ಪʼ ಮತ್ತು ʼಬ್ರೋಕರಪ್ಪʼ ಎಂದು ಕರೆದಿದ್ದಾರೆ.
ಸುಳ್ಳು ಹೇಳುವ ಚಾಳಿಗೆ ಚಿಕಿತ್ಸೆ ಇಲ್ಲ. ʼಸಿದ್ದಕಲೆʼಯ ನಿಷ್ಣಾತರಿಗೆ ಸುಳ್ಳೇ ದೇವರು, ಸುಳ್ಳೇ ಸರ್ವಸ್ವ. ಜೆಡಿಎಸ್ ಮುಳುಗುತ್ತಿರುವ ಹಡುಗು ಎಂದು ಸುಳ್ಳು ಹೇಳಿಕೊಂಡು ಓಡಾಡುವ ʼಗೊಬೆಲಪ್ಪʼನ ʼಬೂಸಿಭಜನೆʼ ಹೊಸದೇನೂ ಅಲ್ಲ. ರಾಜಕೀಯ ಜನ್ಮಕೊಟ್ಟ ಪಕ್ಷದ ಬಗ್ಗೆಯೇ ಹಗುರವಾಗಿ ಮಾತನಾಡುವ ʼಕೃತಘ್ನʼತೆಗೆ ಇದೇ ಸಾಕ್ಷಿ.
ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. ʼಬ್ರೂಟಸ್ ಮನಃಸ್ಥಿತಿʼ, ಸಂದರ್ಭಕ್ಕೆ ತಕ್ಕಂತೆ ʼಬಣ್ಣ ಬದಲಿಸುವ ಊಸರವಳ್ಳಿ ದುಸ್ಥಿತಿʼ. ಆಪರೇಷನ್ ಕಮಲದಲ್ಲಿ ಕುಮ್ಮಕ್ಕಾಗಿ ಮೈತ್ರಿ ಸರಕಾರ ಕೆಡವಿದ ಸಿದ್ದಶೂರನ ಸಾರಥ್ಯದಲ್ಲಿ ʼಆಪರೇಷನ್ ಹಸ್ತʼ ನಡೆಯುತ್ತಿದೆ.
ಜೆಡಿಎಸ್ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ನಮ್ಮ ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ʼಬ್ರೋಕರಪ್ಪʼನ ಕುತಂತ್ರಕ್ಕೆ ಹೆದರುವ ಪ್ರಶ್ನೆ ಇಲ್ಲ. ಹಿಂದೆ ದೇವರಾಜ ಅರಸು ಅವರಿಗೆ ನರಕಯಾತನೆ ನೀಡಿದ್ದ ಕಾಂಗ್ರೆಸ್, ಈಗ ʼಅಭಿನವ ಅರಸುʼ ಎಂದು ಪುಂಗಿ ಬಿಡುವ ʼಸುಳ್ಳುಸಿದ್ದಪ್ಪʼನಿಗೆ ಶರಣಾಗಿದೆ. ಈ ವ್ಯಕ್ತಿಗೆ ಅರಸು ಹೆಸರೇಳುವ ಅರ್ಹತೆಯೇ ಇಲ್ಲ.
ಜೆಡಿಎಸ್ ಮುಳುಗುವ ಪಕ್ಷವಾ? ತೇಲುವಾ ಪಕ್ಷವಾ? ಎನ್ನುವುದನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ನಾಡಿನ ಜನರೇ ತೋರಿಸುತ್ತಾರೆ. ಅಲ್ಲಿವರೆಗೆ ಸಿದ್ದಸೂತ್ರಧಾರನ ʼಆಪರೇಷನ್ ಹಸ್ತವೆಂಬ ಅಸಹ್ಯʼ ನಡೆಯಲಿ. ಅದಕ್ಕೆ ಎಷ್ಟೇ ʼಕೋನʼಗಳನ್ನು ಸೃಷ್ಟಿಸಿದರೂ ಜೆಡಿಎಸ್ ಜಗ್ಗುವುದಿಲ್ಲ ಎಂದು ಕಿಡಿಕಾರಿದರು.

Share Post