Districts

ಹಾಳು ಮಾಡ್ಬಿಟ್ಟ ಮಾಧುಸ್ವಾಮಿ, ತುಮಕೂರಲ್ಲಿ ಒಂದು ಸೀಟು ಬರಲ್ಲ; ಬಿಜೆಪಿ ಸಂಸದ ಬಸವರಾಜು ಗೋಳು

ತುಮಕೂರು: ನಮ್ಮ ಮಂತ್ರಿ ಹಾಳು ಮಾಡಿಬಿಟ್ಟ, ತುಮಕೂರಲ್ಲಿ ಒಂದು ಸೀಟ್‌ ಬರಲ್ಲ. ಹಾಗೆ ಮಾಡಿಬಿಟ್ಟಿದ್ದಾನೆ ಎಂದು ಸಚಿವ ಮಾಧುಸ್ವಾಮಿ ಹೆಸರೇಳದೆ ತುಮಕೂರು ಬಿಜೆಪಿ ಸಂಸದ ಜಿ.ಎಸ್‌.ಬಸವರಾಜು ಗೋಳು ತೋಡಿಕೊಂಡಿದ್ದಾರೆ. ತುಮಕೂರಿನಲ್ಲಿ ಸಚಿವ ಭೈರತಿ ಬಸವರಾಜು ಹಾಗೂ ಸಂಸದ ಜಿ.ಎಸ್‌.ಬಸವರಾಜು ಜಂಟಿ ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಇಬ್ಬರೂ ಗುಸುಗುಸು ಪಿಸುಪಸು ಮಾತನಾಡಿದ್ದು, ಅದು ಮಾಧ್ಯಮಗಳ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

   ಸಚಿವ ಭೈರತಿ ಬಸವರಾಜು ಕಿವಿಯಲ್ಲಿ ಮಾತನಾಡಿದ ಸಂಸದ ಬಸವರಾಜು, ಈ ನನ್ಮಗ ನಮ್ಮ ಮಂತ್ರಿ ಇದಾನಲ್ಲ, ಅವ್ನು ಹೆಂಗೆ ಅಂದ್ರೆ, ದಕ್ಷಿಣ ಕೊರಿಯಾದ ಕಿಂಗ್‌ ಪಿನ್‌ ಇದಾನಲ್ಲ, ಆ ತರಾ ಎಂದು ಬಸವರಾಜು ಹೇಳಿದ್ದಾರೆ.  ಸಚಿವ ಭೈರತಿ ಬಸವರಾಜು ಮತ್ತೆ ಮಾತಾಡೋಣ ಇರಿ ಎಂದರೂ, ಬಸವರಾಜು ಮಾತನಾಡುತ್ತಲೇ ಇದ್ದರು. ಇದನ್ನು ನೋಡಿದರೆ ತುಮಕೂರು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗೊತ್ತಾಗುತ್ತದೆ.

ಇನ್ನು ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ತುಮಕೂರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿದ್ದ ಸಚಿವ ಮಾಧುಸ್ವಾಮಿ ಸಿಡಿಮಿಡಿಗೊಂಡು ಕಾರ್ಯಕ್ರಮದಿಂದ ಅರ್ಧದಲ್ಲೇ ಎದ್ದುಹೋದ ಘಟನೆ ನಡೆದಿದೆ.

Share Post