DistrictsPolitics

ಕೇಂದ್ರ ನಾಯಕರಿಂದಲೇ ರಾಜ್ಯದಲ್ಲಿ ಬಿಜೆಪಿಗೆ ಸೋಲು; ರೇಣುಕಾಚಾರ್ಯ ಆತ್ಮಾವಲೋಕನ

ದಾವಣಗೆರೆ; ಕೇಂದ್ರ ನಾಯಕರ ತೀರ್ಮಾನಗಳಿಂದಲೇ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾರಣವಾಗಿದೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಭಾವುಕರಾಗಿ ನುಡಿದಿದ್ದಾರೆ. ಅವರು ಈ ಬಾರಿ ಸೋತಿರುವ ಕಾರಣ, ದಾವಣಗೆರೆ ಜಿಲ್ಲೆ ಹೊನ್ನಾಳಿಯ ಹಿರೇಕಕ್ಮಠದಲ್ಲಿ ಆತ್ಮಾವಲೋಕನ ಸಭೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ನಾಯಕರ ತೀರ್ಮಾನಗಳಿಂದಲೇ ಬಿಜೆಪಿಗೆ ಈ ಸೋಲಾಗಿದೆ ಎಂದು ಹೇಳಿದ್ದಾರೆ.

ಒಳಮೀಸಲಾತಿಯಿಂದಾಗಿ ಬಿಜೆಪಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ. ಇದರಿಂದಾಗಿ ನಾವು ಸುಮಾರು 45 ಕ್ಷೇತ್ರಗಳಲ್ಲಿ ಸೋತಿದ್ದೇವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಇನ್ನು ಕೇಂದ್ರ ನಾಯಕರು ಉತ್ತರ ಭಾರತದಲ್ಲಿ ಮಾಡಿದ ಪ್ರಯೋಗವನ್ನು ಇಲ್ಲಿ ಮಾಡಿದ್ದರು. ಇಲ್ಲಿ 72 ಮಂದಿ ಹೊಸಬರಿಗೆ ಟಿಕೆಟ್‌ ನೀಡಿದ್ದರು. ಇದರಲ್ಲಿ 42 ಮಂದಿ ಸೋತಿದ್ದಾರೆ ಎಂದು ರೇಣುಕಾಚಾರ್ಯ ಅಳಲು ತೋಡಿಕೊಂಡಿದ್ದಾರೆ.

ಈ ತಂತ್ರಗಾರಿಕೆಗಳು ಉತ್ತರ ಭಾರತದಲ್ಲಿ ನಡೆಯುತ್ತವೆ. ಆದ್ರೆ ಕರ್ನಾಟಕದಲ್ಲಿ ಈ ತಂತ್ರಗಳು ನಡೆಯೋದಿಲ್ಲ. ಇನ್ನು ಬೆಲೆ ಏರಿಕೆ ಸಂದರ್ಭದಲ್ಲಿ ಉಚಿತ ಅಕ್ಕಿಯನ್ನು ಕಡಿತ ಮಾಡಲಾಯಿತು. ಇದೇ ವೇಳೆ ಕಾಂಗ್ರೆಸ್‌ ಗ್ಯಾರೆಂಟಿ ಕಾರ್ಡ್‌ ಚೆನ್ನಾಗಿ ಕೆಲಸ ಮಾಡಿದೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

Share Post