DistrictsPolitics

ತುಮಕೂರಿನಲ್ಲಿ ರಾಷ್ಟ್ರೀಯ ಬಿಜೆಪಿ ಮಹಿಳಾ ಮೋರ್ಚಾ

ಬೆಂಗಳೂರು: ತುಮಕೂರಿನಲ್ಲಿ ಇಂದು ಮತ್ತು ನಾಳೆ ( 20 ಮತ್ತು 21ರಂದು) ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ನಡೆಯಲಿದೆ ಎಂದು ರಾಜ್ಯ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದ್ದಾರೆ.

ಬೆಂಗಳೂರಿನ ಜಗನ್ನಾತ ಭವನದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿರುವ ಅವರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಆಶಯದಂತೆ ಕಾರ್ಯಕ್ರಮ ಏರ್ಪಡಿಸಿದ್ದು, ತುಮಕೂರಿನ ಶೆಟ್ಟಿ ಹಳ್ಳಿ ರಿಂಗ್ ರೋಡ್ ಬಳಿ ಇರುವ ಆರ್‍ಟಿಪಿ ಕನ್ವೆನ್ಷನ್ ಸೆಂಟರ್ ನಲ್ಲಿ ಕಾರ್ಯಕಾರಿಣಿ ನಡೆಯಲಿದೆ ಎಂದರು.

ಮಹಿಳೆಯರಿಗೆ ವಿಶೇಷ ಗೌರವ, ಘನತೆಯನ್ನು ಕರ್ನಾಟಕ ರಾಜ್ಯ ನೀಡಿದೆ. ಕಳೆದ 8 ವರ್ಷಗಳ ಅವಧಿಯಲ್ಲಿ ನಮ್ಮ ರಾಜ್ಯದ ಅನೇಕ ಸಾಧಕ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿಜಿ ಅವರು ಪದ್ಮ ಪುರಸ್ಕಾರ ಸೇರಿ ವಿಶೇಷ ಗೌರವಗಳನ್ನು ನೀಡಿದ್ದಾರೆ. ತುಮಕೂರು ಜಿಲ್ಲೆಯ ಸೂಲಗಿತ್ತಿ ನರಸಮ್ಮ, ಸುಕ್ರಿ ಬೊಮ್ಮನಗೌಡ ಅವರಿಗೂ ಗೌರವ ಲಭಿಸಿದೆ. ಪರಿಸರಕ್ಕೆ ಕೊಡುಗೆ ನೀಡಿದ ಸಾಲುಮರದ ತಿಮ್ಮಕ್ಕ ಅವರನ್ನೂ ಗೌರವಿಸಲಾಗಿದೆ ಎಂದು ತಿಳಿಸಿದರು.
ಅನೇಕ ವಿಷಯಗಳ ಚಿಂತನ ಮಂಥನ ನಡೆಯಲಿದೆ.

37 ರಾಜ್ಯಗಳ ಮಹಿಳಾ ಘಟಕದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮೋರ್ಚಾದ ರಾಷ್ಟ್ರೀಯ ಪ್ರಭಾರಿ ದುಷ್ಯಂತಕುಮಾರ್ ಗೌತಂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಭಾಗವಹಿಸಲಿದ್ದಾರೆ. 20ರಂದು ಸಂಜೆ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ವಾನತಿ ಶ್ರೀನಿವಾಸನ್ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ನಡೆಯಲಿದೆ. ಸ್ಥಳೀಯ ಸಂಸದರು, ಶಾಸಕರು ಭಾಗವಹಿಸಲಿದ್ದಾರೆ. 21ರಂದು ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಮಾರೋಪ ಮಾಡಲಿದ್ದಾರೆ ಎಂದರು.

ಮೊದಲ ದಿನ ಬೆಳಿಗ್ಗೆ ತುಮಕೂರಿನ ಟೌನ್‍ಹಾಲ್ ಸರ್ಕಲ್‍ನಿಂದ ತುಮಕೂರು ಸಿದ್ಧಗಂಗಾ ಮಠದ ಆವರಣಕ್ಕೆ ಬೈಕ್ ರ್ಯಾಲಿ ನಡೆಯಲಿದೆ. ಪರಿಸರ ಸ್ನೇಹಿ ಮತ್ತು ಸ್ಥಳೀಯ ಉಡುಗೆ ತೊಡುಗೆಗಳಿಗೆ, ಆಹಾರಕ್ಕೆ ಆದ್ಯತೆ ಕೊಡಲಾಗುತ್ತಿದೆ ಎಂದು ತಿಳಿಸಿದರು.

Share Post