DistrictsPolitics

ಶಾಸಕರಿಂದಲೇ ತಡೆ ಎಂಬ ಬಿಜೆಪಿಗರ ಆರೋಪ; ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ

ಮೈಸೂರು; ವರುಣಾ ಕ್ಷೇತ್ರಕ್ಕೆ ಸರ್ಕಾರ ನೀಡಿದ್ದ ಅನುದಾನ ಬಳಕೆಗೆ ಕ್ಷೇತ್ರದ ಶಾಸಕರಿಂದಲೇ ತಡೆಯಾಗುತ್ತಿದೆ ಎಂಬ ಬಿಜೆಪಿಗರ ಆರೋಪಕ್ಕೆ ಸ್ಥಳೀಯ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ಗಮನಕ್ಕೆ ತರದೆ ನನ್ನ ಕ್ಷೇತ್ರಕ್ಕೆ ತಮಗೆ ಇಷ್ಟ ಬಂದ ಹಾಗೆ ಹಣ ಬಿಡುಗಡೆ ಮಾಡಿದ್ದರು ಹೀಗಾಗಿ ನಾವು ವಿರೋಧಿಸಿದ್ದೇವೆ ಎಂದು ಹೇಳಿದ್ದಾರೆ.

ನನ್ನ ಕ್ಷೇತ್ರದಲ್ಲಿ ಯಾವ ಗ್ರಾಮದಲ್ಲಿ ಎಷ್ಟು ಸಮಸ್ಯೆ ಇದೆ ಎಂಬುದು ನನಗೆ ಗೊತ್ತಿದೆ. ಎಲ್ಲಿಗೆ ತುರ್ತಾಗಿ ಅಭಿವೃದ್ಧಿ ಬೇಕು ಎಂಬುದರ ಬಗ್ಗೆ ಯೋಚಿಸಿ ಹಣ ನೀಡಬೇಕು. ನಿಮಗೆ ಇಷ್ಟ ಬಂದ ಕಡೆ ಹಣ ಬಿಡುಗಡೆ ಮಾಡಿರುವುದು ಸರಿಯಲ್ಲ ಎಂದು ಪ್ರಶ್ನಿಸಿದ್ದೆ ಹೊರತು ನಾನು ಸರ್ಕಾರದ ಅನುದಾನಕ್ಕೆ ತಡೆಯೊಡ್ಡಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ.

ನನ್ನ ಕ್ಷೇತ್ರದ ಅಭಿವೃದ್ಧಿಗೆ ನಾವು ಸದಾ ಸಿದ್ಧ. ಸರ್ಕಾರ ನನ್ನ ಮುಖಾಂತರ ಈಗಲೂ ಎಷ್ಟು ಸಾವಿರ ಕೋಟಿ ಬಿಡುಗಡೆ ಮಾಡಿದರೂ ನನ್ನ ವಿರೋಧವಿಲ್ಲ. ಕ್ಷೇತ್ರದ ಶಾಸಕರನ್ನ ಪರಿಗಣನೆಗೆ ತೆಗೆದುಕೊಳ್ಳದೆ ಸರ್ಕಾರ ಹಣ ಬಿಡುಗಡೆ ಮಾಡಿದರೆ ಹೇಗೆ..? ಈ ಬಿಜೆಪಿಯವರು ಸುಖಾಸುಮ್ಮನೆ ನನ್ನ ಮೇಲೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದಿದ್ದಾರೆ.

Share Post