CrimeNational

ಡಿಸೆಂಬರ್ 13ರಂದು ಕೃಷ್ಣಾ ಜಲವಿವಾದ ವಿಚಾರಣೆ

ನವದೆಹಲಿ: ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ 30.12.2010ರ ಮತ್ತು 29.11.2013ರ ಅಂತಿಮ ಐತೀರ್ಪುಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್ ನಲ್ಲಿ ತಕ್ಷಣ ಪ್ರಕಟಿಸಬೇಕೆಂದು ಕರ್ನಾಟಕ – ಮಹಾರಾಷ್ಟ್ರ ಸರ್ಕಾರಗಳು ಕೋರಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ದ್ವಿಸದಸ್ಯ ಪೀಠ ಡಿಸೆಂಬರ್‌ 13ರಂದು ವಿಸ್ತೃತ ವಿಚಾರಣೆಗೆ ಈ ಪ್ರಕರಣವನ್ನು ಪಟ್ಟಿ ಮಾಡಬೇಕೆಂದು ಸೂಚಿಸಿತು.

ಕೇಂದ್ರ ಸರ್ಕಾರದ ಹಿರಿಯ ನ್ಯಾಯವಾದಿ ವಾಸೀಂ ಎ. ಖಾದ್ರಿಯವರು ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುವ ಪ್ರಕ್ರಿಯೆ ಕೇಂದ್ರ ಸರ್ಕಾರದ ಉನ್ನತ ಹಂತದಲ್ಲಿ ಪರಿಶೀಲನೆಯಲ್ಲಿದೆ. ಹೀಗಾಗಿ ಎರಡು ವಾರಗಳ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದು ಕೋರಿದರು. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಾದವನ್ನು ಆಲಿಸಿದ ನಂತರ ಡಿಸೆಂಬರ್ 13ರಂದು ವಿಚಾರಣೆಗೆ ಕಲಾಪದ ಪಟ್ಟಿಯಲ್ಲಿ ಸೇರ್ಪಡೆ ಮಾಡಲು  ಕೋರ್ಟ್‌ ಆದೇಶಿಸಿತು.
ಕರ್ನಾಟಕದ ಪರವಾಗಿ ವಿಸ್ತೃತವಾದ ವಾದ ಮಂಡಿಸಿದ ನ್ಯಾಯವಾದಿ ಶ್ಯಾಂ ದಿವಾನ್ ಕೇಂದ್ರ ಸರ್ಕಾರವು ನ್ಯಾಯಾಧಿಕರಣದ ಆದೇಶಗಳನ್ನು ಗೆಜೆಟ್ ನಲ್ಲಿ ಪ್ರಕಟಿಸಲು ಸರ್ವೋಚ್ಛ ನ್ಯಾಯಾಲಯ  ದಿನಾಂಕ:16.09.2011ರಂದು ನೀಡಿದ ತಡೆಯಾಜ್ಞೆ ಅಡ್ಡಿಯುಂಟುಮಾಡುತ್ತಿದೆ. ಆದರೆ ಅಂತರರಾಜ್ಯ ಜಲವಿವಾದ ಕಾಯಿದೆಯ ಕಲಂ6ರ ಅಡಿಯಲ್ಲಿ ನ್ಯಾಯಾಧಿಕರಣದ ಐತೀರ್ಪುಗಳು ಸರ್ವೋಚ್ಛ ನ್ಯಾಯಾಲಯದ ಡಿಕ್ರಿಗೆ ಸಮಾನವಾಗಿವೆ. ಹೀಗಾಗಿ ತಕ್ಷಣ ಅವುಗಳನ್ನು ಗೆಜೆಟ್ ನಲ್ಲಿ ಪ್ರಕಟಿಸಬೇಕೆಂದು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಾವೇರಿ ನ್ಯಾಯಾಧಿಕರಣದ ಐತೀರ್ಪನ್ನು ಪ್ರಕಟಿಸಲು ಸರ್ವೋಚ್ಛ ನ್ಯಾಯಾಲಯ ನಿರ್ದೇಶನ ನೀಡಿದಂತೆ ಈ ಪ್ರಕರಣದಲ್ಲೂ ನಿರ್ದೇಶನ ನೀಡಿ ಗೆಜೆಟ್ ಪ್ರಕಟಣೆಗೆ ಅವಕಾಶ ಕಲ್ಪಿಸಬೇಕೆಂದು ಸರ್ವೋಚ್ಛ ನ್ಯಾಯಾಲಯವನ್ನು ಕೋರಿದರು.

ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2 (ಬ್ರಿಜೇಶ್ ಕುಮಾರ್ ಆಯೋಗ) ಐತೀರ್ಪು 2050ನೇ ಇಸವಿ ವರೆಗೆ ಜಾರಿಯಲ್ಲಿ ಇರುತ್ತದೆ. ಈಗಾಗಲೇ 10 ಅಮೂಲ್ಯ ವರ್ಷಗಳನ್ನು ನಾವು ಕಳೆದುಕೊಂಡಿದ್ದೇವೆ. 1205 ಕಿ.ಮೀ. ಉದ್ದದ ಕಾಲುವೆ ಜಾಲವನ್ನು ನಿರ್ಮಾಣ ಮಾಡಿದ್ದು, 13321 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ. ಆದರೆ ನೀರು ಮಾತ್ರ ವ್ಯರ್ಥವಾಗಿ ಬಂಗಾಳ ಕೊಲ್ಲಿ ಸಾಗರವನ್ನು ಸೇರುತ್ತಿದೆ. ರೈತರು ಕಾಲುವೆಗಳಿಗೆ ನೀರು ಒದಗಿಸುವಂತೆ ಚಳುವಳಿ ಮಾಡುತ್ತಿದ್ದಾರೆ ಎಂದು ಸಮರ್ಥವಾಗಿ ವಾದ ಮಂಡಿಸಿದರು. ತೆಲಂಗಾಣದ ನ್ಯಾಯವಾದಿ ಸಿ.ಎಸ್.ವೈದ್ಯನಾಥನ್ ರವರು ಈ ಪ್ರಕರಣದಲ್ಲಿ ವಿವರವಾದ ವಾದ ಮಂಡನೆಗೆ ಅವಕಾಶ ಕೋರಿದರು. 4 ರಾಜ್ಯಗಳು ತಮ್ಮ ವಾದ ಪ್ರತಿವಾದಗಳ ಪ್ರಮುಖ ಅಂಶಗಳನ್ನು ಒಳಗೊಂಡ ಮೂರು ಪುಟದ ಟಿಪ್ಪಣಿಯನ್ನು ವಿಚಾರಣೆಗೆ 48 ಗಂಟೆಗಳಿಗೂ ಮುನ್ನ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿ ಡಿಸೆಂಬರ್ 13ರಂದು ಮಧ್ಯಾಹ್ನ 2.00 ಗಂಟೆಗೆ ಪ್ರಕರಣದ ವಿಚಾರಣೆಗೆ ನಿಗದಿಪಡಿಸಿದರು.

ವಿಚಾರಣೆ ವೀಕ್ಷಿಸಿದ ಸಚಿವ ಗೋವಿಂದ ಕಾರಜೋಳ

ಸರ್ವೂಚ್ಚ ನ್ಯಾಯಾಲಯದಲ್ಲಿ ಇಂದು ನಡೆದ ಕೃಷ್ಣ ಜಲ ವಿವಾದ ವಿಚಾರಣೆಯನ್ನು ಜಲ ಸಂಪನ್ಮೂಲ ಸಚಿವ  ಗೋವಿಂದ ಕಾರಜೋಳ ವಿಜಯಪುರದ ತಮ್ಮ ನಿವಾಸದಲ್ಲಿ ಆನ್‌ಲೈನ್‌ ಮೂಲಕ ವೀಕ್ಷಿಸಿದರು.

Share Post