CrimeDistricts

ಇಬ್ಬರು ಮಕ್ಕಳನ್ನು ಕೊಂದ ಪಾಪಿ ಕೆಮಿಕಲ್‌ ಎಂಜಿನಿಯರ್‌

ದಾವಣಗೆರೆ; ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೆಮಿಕಲ್‌ ಎಂಜಿನಿಯರ್‌ ಆಗಿದ್ದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದಿರುವ ದಾರುಣ ಘಟನೆ ನಡೆದಿದೆ. ದಾವಣಗೆರೆ ನಗರದ ಆಂಜನೇಯ ಮಿಲ್‌ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ.

ನಾಲ್ಕು ವರ್ಷದ ಅದ್ವೈತ್ ಹಾಗೂ ಅನ್ವೀತ್‌ ಮೃತಪಟ್ಟವರು. ಅಮರ ಕಿತ್ತೂರು ಎಂಬಾತನೇ ತನ್ನ ಮಕ್ಕಳನ್ನು ಕೊಂದಿದ್ದಾನೆ. ಹರಿಹರದ ಕಾರ್ಗಿಲ್‌ ಫ್ಯಾಕ್ಟರಿಯಲ್ಲಿ ಈತ ಕೆಮಿಕಲ್‌ ಎಂಜಿನಿಯರ್‌ ಆಗಿದ್ದಾನೆ. ಪತ್ನಿ ಜಯಲಕ್ಷ್ಮೀ ತನ್ನ ತವರು ವಿಜಯಪುರಕ್ಕೆ ಹೋಗಿದ್ದಳು. ಈ ವೇಳೆ ಮಕ್ಕಳನ್ನು ಕಾರಿನಲ್ಲಿ ಕರೆದೊಯ್ದಿದ್ದ ತಂದೆ, ಇಬ್ಬರೂ ಮಕ್ಕಳ ಬಾಯಿಗೆ ಟೇಪ್‌ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹಗಳನ್ನು ಮನೆಗೆ ತಂದಿದ್ದಾರೆ.

ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರೂ ಮಕ್ಕಳನ್ನು ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Share Post