CrimeNational

ಶ್ರದ್ಧಾ ಭೀಕರ ಕೊಲೆ ಪ್ರಕರಣ; ಶವ ಮನೆಯಲ್ಲಿಟ್ಟುಕೊಂಡು ಮತ್ತೊಬ್ಬಳನ್ನ ಕರೆತಂದಿದ್ದ ಆರೋಪಿ

ನವದೆಹಲಿ; ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ಕೊಲೆ ಪ್ರಕರಣದ ಹಿಂದಿನ ಕರಾಳ ಸತ್ಯಗಳು ಒಂದೊಂದಾಗಿ ಹೊರಬರುತ್ತಿವೆ. ಪ್ರೇಯಸಿ ಶ್ರದ್ಧಾಳನ್ನು ಭೀಕರವಾಗಿ ಕೊಲೆಗೈದಿದ್ದ ಅಫ್ತಾಬ್ ಪೂನಾವಾಲಾ, ಮನೆಯಲ್ಲಿ ಶವ ಇದ್ದಾಗಲೇ ಮನೆಗೆ ಮತ್ತೊಬ್ಬ ಮಹಿಳೆಯನ್ನು ಕರೆತಂದಿದ್ದ ಎಂಬುದು ಬಯಲಾಗಿದೆ. ಡೇಟಿಂಗ್‌ ಆಪ್‌ ಮೂಲಕ ಮಹಿಳೆಯನ್ನು ಮನೆಗೆ ಕರೆಸಿಕೊಂಡಿದ್ದ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ಆ ಹೊಸ ಗೆಳತಿ ಅಫ್ತಾಬ್‌ ಇದ್ದ ಅಪಾರ್ಟ್‌ಮೆಂಟ್‌ಗೆ ಹಲವು ಸಲ ಭೇಟಿ ಮಾಡಿದ್ದಾಳೆ ಎಂಬುದನ್ನು ಕೂಡಾ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮುಂಬೈನಲ್ಲಿ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರದ್ಧಾಳಿಗೆ ಆರೋಪಿ ಅಫ್ತಾಬ್‌ ಡೇಟಿಂಗ್‌ ಆಪ್‌ ಮೂಲಕ ಪರಿಚಯವಾಗಿದ್ದ. ಮದುವೆಯಾಗುತ್ತಾನೆಂದು ನಂಬಿದ್ದ ಆಕೆ, ಅವನೊಂದಿಗೆ ದೆಹಲಿಗೆ ಹೋಗಿ ನೆಲೆಸಿದ್ದಳು. ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಶ್ರದ್ಧಾ ಮದುವೆಯಾಗುವಂತೆ‌ ಅಫ್ತಾಬ್‌ನನ್ನು ಪೀಡಿಸಿದ್ದಾಳೆ. ಇದ್ರಿಂದ ರೊಚ್ಚಿಗೆದ್ದ ಅಫ್ತಾಬ್‌, ಶ್ರದ್ಧಾಳನ್ನು ಕೊಲೆ ಮಾಡಿದ್ದಾನೆ. ಅನಂತರ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಫ್ರಿಡ್ಜ್‌ ತಂದು ಅದರಲ್ಲಿ ಬಚ್ಚಿಟ್ಟಿದ್ದಾನೆ. ನಂತರ ಹದಿನೈದು ದಿನಗಳ ಕಾಲ ದೇಹದ ಭಾಗಗಳನ್ನು ಕಾಡಿಗೆ ಎಸೆದು ಬಂದಿದ್ದಾನೆ.

ಶ್ರದ್ಧಾ ಆರು ತಿಂಗಳಾದರೂ ಪತ್ತೆ ಇಲ್ಲದ್ದನ್ನು ಕಂಡು ಪೋಷಕರು ಪೊಲೀಸರಿಗೆ ದೂರು ನೀಡಿದಾಗ ಕೊಲೆಯಾಗಿರುವ ವಿಷಯ ಗೊತ್ತಾಗಿದೆ. ರಕ್ತದ ಕಲೆ ಕಾಣಿಸದಂತೆ ಮನೆಯನ್ನು ಸ್ವಚ್ಛ ಮಾಡಿದ್ದ. ವಿಚಿತ್ರ ಅಂದ್ರೆ ಮೃತದೇಹ ಮನೆಯಲ್ಲಿದ್ದಾಗಲೇ ಮತ್ತೊಬ್ಬ ಗೆಳತಿಯನ್ನು ಅವನು ಮನೆಗೆ ಕರೆಸಿಕೊಂಡಿದ್ದಾನೆ. ಹಲವು ಬಾರಿ ಆಕೆ ಆ ಮನೆಗೆ ಬಂದು ಹೋಗಿದ್ದಾಳೆ. ಹೀಗಾಗಿ ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

Share Post