BengaluruCrime

ಜೈ ಶ್ರೀರಾಮ್ ಎನ್ನಬೇಕಾ..? ಎನ್ನುತ್ತಾ ಅನ್ಯ ಕೋಮಿನ ಯುವಕರ ಪುಂಡಾಟ

ಬೆಂಗಳೂರು; ಶ್ರೀರಾಮನವಮಿ ಮುಗಿಸಿಕೊಂಡು ಕಾರಿನಲ್ಲಿ‌ ಹೋಗುತ್ತಿದ್ದ ಯುವಕರನ್ನು ಅಡ್ಡಗಟ್ಟಿದ ಅನ್ಯಕೋಮಿನ ಯುವಕರು ಪುಂಡಾಟ ಮೆರೆದಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರದ ಬೆಟ್ಟಳ್ಳಿ ಮಸೀದಿ ಬಳಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

   ಕಾರಿನ ಬಳಿ ಬಂದ ಯುವಕರು ಜೈ ಶ್ರೀರಾಮ್ ಹೇಳಬೇಕಾ..?, ಜೈಶ್ರೀರಾಮ್ ಇಲ್ಲ, ಓನ್ಲಿ ಅಲ್ಲಾ ಹು ಅಕ್ಬರ್ ಎಂದಿದ್ದಾರೆ. ಜೊತೆಗೆ ಕಾರಿನಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿದ್ದಾರೆ ಎನ್ನಲಾಗಿದೆ.

 

  ಈ ಬಗ್ಗೆ ಜಗಳ ನಡೆದಿದ್ದು, ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಲಯ ಡಿಸಿಪಿ ಲಕ್ಷ್ಮೀ ಪ್ರಸಾದ್, ‘ ಬೆಂಗಳೂರಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಯುವಕರನ್ನು ಅಡ್ಡಗಟ್ಟಿ ಪುಂಡಾಟ ಮೆರೆದಿದ್ದಾರೆ. ಈ ಹಿನ್ನಲೆ ಐಪಿಸಿ ಸೆಕ್ಷನ್ 295a, 298, 143, 147, 504,324, 326, 149, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಯುವಕರು ಕಾರಿನಲ್ಲಿ ಹೋಗುವಾಗ ಬಾವುಟ ಹಿಡಿದುಕೊಂಡು ಜೈ ಶ್ರೀರಾಮ್ ಅಂದಿದ್ದಾರೆ. ಈ ವೇಳೆ ಇಬ್ಬರು ಯುವಕರು ಕಾರು ಅಡ್ಡಗಟ್ಟಿದ್ದಾರೆ. ಜೈ ಶ್ರೀರಾಮ್ ಅಂತಾ ಯಾಕೆ ಕೂಗ್ತಿರಾ, ಅಲ್ಲಾ ಅನ್ನಿ ಎಂದು ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡಿ ಮತ್ತಷ್ಟು ಯುವಕರನ್ನು ಕರೆತಂದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಇನ್ನೂ ಮೂವರು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಕೇಸ್ ರಿಜಿಸ್ಟರ್ ಆಗಿದೆ. ಹಲ್ಲೆ ಮಾಡಿದವರ ಪತ್ತೆ ನಡೆಯುತ್ತಿದೆ. ಆರೋಪಿಗಳ ಗುರುತು ಪತ್ತೆಯಾಗಿದೆ ಎಂದಿದ್ದಾರೆ.

Share Post