BengaluruPolitics

ವಿ.ಸೋಮಣ್ಣ ಕಾಂಗ್ರೆಸ್‌ಗೆ ಹೋಗುತ್ತಾರೆಂಬ ವಿಚಾರ; ಸಚಿವರ ಜೊತೆ ಚರ್ಚಿಸಿದ ಬಿ.ಎಲ್‌.ಸಂತೋಷ್‌

ಬೆಂಗಳೂರು; ಸಚಿವ ವಿ.ಸೋಮಣ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಾರೆಂಬ ವಿಚಾರ ಹಲವು ದಿನಗಳಿಂದ ಚರ್ಚೆಯಲ್ಲಿದೆ. ಈ ನಡುವೆಯೇ ಬಿಜೆಪಿಯ ನಾಯಕರು ವಿ.ಸೋಮಣ್ಣ ಜೊತೆ ಚರ್ಚೆ ಮಾಡಿ, ಅವರಲ್ಲಿನ ಅಸಮಾಧಾನ ಶಮನ ಮಾಡೋ ಪ್ರಯತ್ನ ಮಾಡುತ್ತಿದ್ದಾರೆ. ಇಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಸೋಮಣ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವೇಳೆ ಸೋಮಣ್ಣ ಅವರು ವಿಜಯ ಸಂಕಲ್ಪ ರಥಯಾತ್ರೆಗೆ ಆಹ್ವಾನ ನೀಡಿಲ್ಲ. ನನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಾಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಸೋಮಣ್ಣ ಅವರು ಚಾಮರಾಜನಗರ ಉಸ್ತುವಾರಿ ಸಚಿವರು. ಚಾಮರಾಜನಗರ ಜಿಲ್ಲೆಗೆ ಸೇರುವ ಮಹದೇಶ್ವರ ಬೆಟ್ಟದಲ್ಲಿ ವಿಜಯ ಸಂಕಲ್ಪ ರಥಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಚಾಲನೆ ನೀಡಿದ್ದರು. ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ ಅಂತ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಸೋಮಣ್ಣ ಅವರು ನಿನ್ನೆ ಅವರ ಬೆಂಬಲಿಗರ ಜೊತೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಬೆಂಬಲಿಗರು ಒಂದು ಕ್ಲ್ಯಾರಿಟಿ ನೀಡುವಂತೆ ಸೋಮಣ್ಣ ಅವರನ್ನು ಕೇಳಿದ್ದಾರೆ. ಆಗ ಸೋಮಣ್ಣ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

Share Post