Bengaluru

ಕುವೆಂಪುರನ್ನು ಅವಮಾನಿಸಿದ್ದು ಕಾಂಗ್ರೆಸ್‌; ಬಿಜೆಪಿ ಸರಣಿ ಟ್ವೀಟ್‌

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರನ್ನು ಕಾಂಗ್ರೆಸ್‌ ಸರ್ಕಾರವಿದ್ದಾಗಲೇ ಅವಮಾನಿಸಿ, ಅದನ್ನು ನಮ್ಮ ತಲೆಗೆ ಕಟ್ಟಲು ಹೊರಟ ಕಾಂಗ್ರೆಸ್ ನಾಟಕ ಬಯಲಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಅಧಿಕೃತ ಟ್ವೀಟರ್‌ ಖಾತೆಯಿಂದ ಸರಣಿ ಟ್ವೀಟ್‌ ಮಾಡಲಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ಅವಮಾನಿಸಲಾಗಿದೆ ಎಂದು ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿತ್ತು. ಜೊತೆಗೆ ಮಾಜಿ ಸಿಎಂ ಸಿದ್ದರಾಮುಯ್ಯ ಕೂಡಾ ಈ ಬಗ್ಗೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಕುವೆಂಪು ಕುರಿತು ಪಠ್ಯದಲ್ಲಿ ಉಲ್ಲೇಖಿಸಿರುವ ವಿಚಾರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮುದ್ರಿಸಿದ್ದು ಎಂದು ತಿರುಗೇಟು ನೀಡಿದೆ.

‘ಅದೇ ಶಬ್ದ, ಅವೇ ವಾಕ್ಯ, ಅವೇ ಸಾಲು! ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ಕುವೆಂಪು ಅವರ ಕುರಿತು ಕಾಂಗ್ರೆಸ್ ಅವಧಿಯಲ್ಲಿ ಬರಗೂರು ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮುದ್ರಿಸಿತ್ತು. ತಮ್ಮದೇ ಸರ್ಕಾರದ ಅವಧಿಯಲ್ಲಿ ತಾವೇ ನೇಮಿಸಿದ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಕುವೆಂಪು ಅವರನ್ನು ಶಬ್ದಗಳಲ್ಲಿ ಅವಮಾನಿಸಿತ್ತು. ಅದನ್ನೀಗ ಬಿಜೆಪಿ ತಲೆಗೆ ಕಟ್ಟುವ ವ್ಯರ್ಥ ಪ್ರಲಾಪದಲ್ಲಿ ಕಾಂಗ್ರೆಸ್ ತೊಡಗಿರುವುದು ಹಾಸ್ಯಾಸ್ಪದ. ಸಿದ್ದರಾಮಯ್ಯ ಕಾಲದಲ್ಲಿ ಆಗದ ಅವಮಾನ ಈಗ ಹೇಗೆ?’ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

 

Share Post