BengaluruCrime

ಸಂಗಾತಿ ಮೇಲೆ ಅನುಮಾನ; ಸಹಜೀವನ ನಡೆಸುತ್ತಿದ್ದವನನ್ನೇ ಕೊಲೆಗೈದ ಯುವತಿ

ಬೆಂಗಳೂರು; ಬೆಂಗಳೂರಿನಲ್ಲಿ ಲಿವ್‌ ಇನ್‌ ರಿಲೇಷನ್‌ಶಿಪ್ಸ್‌ ಹೆಚ್ಚಾಗುತ್ತಿವೆ. ಇದರ ಜೊತೆ ಜೊತೆಗೆ ಇಂತಹ ರಿಲೇಷನ್‌ಶಿಪ್‌ನಲ್ಲೂ ಜಗಳಗಳು, ಮನಸ್ತಾಪಗಳೂ ಕಾಣಿಸುತ್ತಿವೆ. ಅವು ವಿಕೋಪಕ್ಕೆ ತಿರುಗಿ ಕೊಲೆಗಳೂ ಆಗುತ್ತಿವೆ. ಅದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. 34 ವರ್ಷದ ಯುವತಿಯೊಬ್ಬಳು ತನ್ನ ಜೊತೆ ಸಹಜೀವನ ನಡೆಸುತ್ತಿದ್ದಾತನನ್ನೇ ಕೊಲೆ ಮಾಡಿದ್ದಾಳೆ. ಇದೀಗ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ.

ಕೇರಳ ಮೂಲದ ಜಾವಿದ್‌ (೨೪) ಎಂಬಾತನೇ ಕೊಲೆಯಾದ ವ್ಯಕ್ತಿ. ಜಾವಿದ್‌ ಮೊಬೈಲ್‌ ಸೆಂಟರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಮಡಿವಾಳದಲ್ಲಿ ರೂಮ್‌ ಮಾಡಿಕೊಂಡು ವಾಸ ಮಾಡುತ್ತಿದ್ದ. ಇದೇ ವೇಳೆ ಆತನಿಗಿಂತ ಹತ್ತು ವರ್ಷ ದೊಡ್ಡವಳಾದ ಬೆಳಗಾವಿ ಮೂಲದ ರೇಣುಕಾ ಪರಿಚಯವಾಗಿದ್ದಾಳೆ. ಇಬ್ಬರ ನಡುವೆ ಪ್ರೀತಿ ಚಿಗುರಿದ್ದು, ಇಬ್ಬರೂ ಹುಳಿಮಾವಿನ ಅಕ್ಷಯನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಸಹಜೀವನ ನಡೆಸುತ್ತಿದ್ದರು. ಆದ್ರೆ ಇಬ್ಬರಿಗೂ ಪರಸ್ಪರ ಸಂಶಯ ಇತ್ತು. ಹಾಗಾಗಿ, ಇಬ್ಬರ ನಡುವೆ ಯಾವಾಗಲೂ ಜಗಳ ನಡೆಯುತ್ತಿತ್ತು ಎಂದು ಅಪಾರ್ಟ್‌ಮೆಂಟ್‌ ನಿವಾಸಿಗಳು ಹೇಳಿದ್ದಾರೆ.

ಅದೇ ರೀತಿ ಸೆಪ್ಟೆಂಬರ್‌ 5ರಂದು ಕೂಡಾ ಇಬ್ಬರ ನಡುವೆ ಜೋರು ಜಗಳ ನಡೆದಿದ್ದು, ಈ ವೇಳೆ ರೇಣುಕಾ, ಜಾವಿದ್‌ಗೆ ಚಾಕುವಿನಿಂದ ಇರಿದಿದ್ದಾಳೆ. ಅನಂತರ ಅಪಾರ್ಟ್‌ಮೆಂಟ್‌ ನಿವಾಸಿಗಳ ನೆರವಿನಿಂದ ಆತನನ್ನು ಆಸ್ಪತ್ರೆಗೆ ಸೇರಿದ್ದಾಳೆ. ಅನಂತರ ಆಕೆ ಅಪಾರ್ಟ್‌ಮೆಂಟ್‌ಗೆ ತೆರಳಿ, ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದಳು. ಇದನ್ನು ಅರಿತ ಅಪಾರ್ಟ್‌ಮೆಂಟ್‌ ನಿವಾಸಿಗಳು, ಫ್ಲಾಟ್‌ಗೆ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಪೊಲೀಸರನ್ನು ಕರೆಸಿ, ಆಕೆಯನ್ನು ಬಂಧಿಸುವಂತೆ ಮಾಡಿದ್ದಾರೆ.

ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಾವಿದ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

 

Share Post