BengaluruCrime

ಗಂಡ ವಿಡಿಯೋ ಕಾಲ್‌ನಲ್ಲಿದ್ದಾಗಲೇ ಮಗುವನ್ನು ಕೊಂದ ಪಾಪಿ ತಾಯಿ!

ಬೆಂಗಳೂರು; ಗೋವಾದಲ್ಲಿ ಬೆಂಗಳೂರು ಮೂಲದ ಕೃತಕ ಬುದ್ಧಿಮತ್ತೆ ಕಂಪನಿಯೊಂದರ ಸಿಇಒ ತನ್ನ ನಾಲ್ಕು ವರ್ಷದ ಮಗುವನ್ನು ಕೊಲೆ ಮಾಡಿದ್ದಳು. ವಿಚ್ಛೇದನ ತೆಗೆದುಕೊಳ್ಳುತ್ತಿರುವ ಗಂಡನಿಗೆ ಮಗುವನ್ನು ತೋರಿಸಬಾರದು ಅನ್ನೋ ಉದ್ದೇಶದಿಂದ ಆಕೆ ಮಗುವನ್ನು ಕೊಂದಿದ್ದಳು. ಇದೀಗ ಆರೋಪಿ ಸುಚನಾ ಮಗುವನ್ನು ಕೊಂದಿದ್ದರ ಬಗ್ಗೆ ಪೊಲೀಸರ ಮುಂದ ಬಾಯಿಬಿಟ್ಟಿದ್ದಾಳೆ.

ನನಗೆ ಮಗುವನ್ನು ಕೊಲ್ಲೋ ಉದ್ದೇಶ ಇರಲಿಲ್ಲ. ಅಚಾನಕ್ಕಾಗಿ ನಡೆದುಹೋಗಿದೆ ಎಂದು ಆಕೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ. ಕೋರ್ಟ್‌ ಪ್ರತಿ ಭಾನುವಾರ ಮಗುವನ್ನು ನೇರವಾಗಿ ಅಥವಾ ವಿಡಿಯೋ ಕಾಲ್‌ನಲ್ಲಿ ಮಾತನಾಡಿಸಲು ತಂದೆ ವೆಂಕಟರಮಣಗೆ ಅವಕಾಶ ನೀಡಿದೆ. ಹೀಗಾಗಿ ಮೊನ್ನೆ ಭಾನುವಾರ ಕೂಡಾ ವೆಂಕಟರಮಣ ವಿಡಿಯೋ ಕಾಲ್‌ ಮಾಡಿದ್ದಾರೆ. ಆಗ ಸುಚನಾ ಮಗ ಮಲಗಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಸರಿ ಮತ್ತೆ ಕರೆ ಮಾಡುತ್ತೇನೆ ಎಂದು ವೆಂಕಟರಮಣ ಕಾಲ್‌ ಕಟ್‌ ಮಾಡಿದ್ದಾರೆ. ಕೆಲ ಹೊತ್ತಾದ ಮೇಲೆ ಮತ್ತೆ ವೆಂಕಟರಮಣ ವಿಡಿಯೋ ಕಾಲ್‌ ಮಾಡಿದ್ದಾರೆ. ಮಗು ಅಲ್ಲೇ ಆಟವಾಡುತ್ತಿದ್ದರಿಂದ ಮಗುವನ್ನು ಬಚ್ಚಿಡುವ ಪ್ರಯತ್ನ ಮಾಡುತ್ತಿರುವಾಗಲೇ ಕಾಲ್‌ ರಿಸೀವ್‌ ಆಗಿದೆ.

ಇದೇ ವೇಳೆ ಮಗುವಿನ ಧ್ವನಿ ಕೇಳಿಸಬಾರದು ಅಂತ ತಲೆದಿಂಬಿನಿಂದ ಆಕೆ ಮಗುವನ್ನು ಅದುಮಿಟ್ಟುಕೊಂಡಿದ್ದಾಳೆ. ಈ ವೇಳೆ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ. ಇದಾದ ಮೇಲೆ ಸುಚನಾ ಕೂಡಾ ಕೈಕುಯ್ದುಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾಳೆ. ಅನಂತರ ಬೇಡ ಎನಿಸಿ, ಮಗುವಿನ ದೇಹವನ್ನು ಸೂಟ್‌ಕೇಸ್‌ಗೆ ತುಂಬಿ ಬೆಂಗಳೂರಿಗೆ ಹೊರಟಿದ್ದಾಳೆ.

ಬೆಂಗಳೂರಿಗೆ ಹೋಗಿ ಏನಾದರು ಮಾಡುವ ಅಂತ ಯೋಚನೆ ಮಾಡಿದ್ದ ಸೂಚನಾ, ಹೋಟೇಲ್​ ಸಿಬ್ಬಂದಿ ಕಡೆಯಿಂದ ಟ್ಯಾಕ್ಸಿ ಬುಕ್​ ಮಾಡಿಸಿಕೊಂಡಿದ್ದಾಳೆ. ಬಳಿಕ ಮೃತ ಮಗ ಚಿನ್ಮಯ್​ ಶವವನ್ನು ಬ್ಯಾಗ್​ನಲ್ಲಿ ಇಟ್ಟುಕೊಂಡು ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಚಿತ್ರದುರ್ಗದಲ್ಲಿ ಬಂಧಿತಳಾಗುತ್ತಾಳೆ.

Share Post