BengaluruCrime

ತೂಕ ಇಳಿಯಲಿಲ್ಲ, ಬದಲಿಗೆ ಪ್ರಾಣವೇ ಹೋಯ್ತು; ನಟಿ ಮೃತಪಟ್ಟಿದ್ದು ಹೇಗೆ..?

ಬೆಂಗಳೂರು; ಹೊಸ ಸೀರಿಯಲ್‌ಗಾಗಿ ತೂಕ ಕಡಿಮೆ ಮಾಡಿಸಿಕೊಳ್ಳಲು ಹೋಗಿ ಸೀರಿಯಲ್‌ ನಟಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.  ದೇಹದ ಕೊಬ್ಬಿನಾಂಶ ತೆಗೆಯುವ ಸರ್ಜರಿ ವೇಳೆ ಇಪ್ಪತ್ತೊಂದು ವರ್ಷದ ಕನ್ನಡದ ಕಿರುತೆರೆ ನಟಿ ಚೇತನಾ ರಾಜ್‌ ಸಾವನ್ನಪ್ಪಿದ್ದಾರೆ. ಚೇತನಾ ರಾಜ್‌ ಅವರು ಫ್ಯಾಟ್‌ ಸರ್ಜರಿ ಮಾಡಿಸಿಕೊಳ್ಳಲು  ನವರಂಗ್ ಸರ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್‌ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದ್ದರಿಂದ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. 

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಧಾರವಾಹಿಗಳಲ್ಲಿ ಚೇತನಾ ರಾಜ್ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟನೆ ಮಾಡಿದ್ದ ಚೇತನಾ ರಾಜ್‌ ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯವರು.

  ನಿನ್ನೆ ಬೆಳಗ್ಗೆ 8.30 ರ ಸುಮಾರಿಗೆ ಚೇತನಾ ಫ್ಯಾಟ್‌ ಸರ್ಜರಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಳು. ನಮಗೆ ವಿಚಾರ ಗೊತ್ತಾಗಿ, ನಾವು ಬರುವ ಹೊತ್ತಿಗೆ ವೈದ್ಯರು ಸರ್ಜರಿ ನಡೆಸುತ್ತಿದ್ದರು. ಸಂಜೆ ಹೊತ್ತಿಗೆ ಶ್ವಾಸಕೋಶಕ್ಕೆ ಕೊಬ್ಬಿನ ಅಂಶ ತುಂಬಿ ಉಸಿರಾಟದ ತೊಂದರೆಯಾಗಿದೆ.  ಆಸ್ಪತ್ರೆಯಲ್ಲಿ ಐಸಿಯು ಸೇರಿದಂತೆ ಯಾವುದೇ ವ್ಯವಸ್ಥೆ ಸೂಕ್ತವಾಗಿಲ್ಲ. ಹೀಗಾಗಿ ಚೇತನಾ ಸಾವನ್ನಪ್ಪಿದ್ದಾಳೆ ಎಂದು ಆಕೆಯ ತಂದೆ ಗೋವಿಂದ ರಾಜ್  ನೋವು ತೋಡಿಕೊಂಡಿದ್ದಾರೆ.

Share Post