BengaluruPolitics

ಬಂಡಾಯವೆದ್ದ ಶಾಸಕ ನೆಹರೂ ಓಲೇಕಾರ್‌; ಸಿಎಂ ವಿರುದ್ಧ ಕೆಂಡಾಮಂಡಲ

ಹಾವೇರಿ; ಬಿಜೆಪಿ 20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಣೆ ಮಾಡಿದೆ. ಇದರಿಂದಾಗಿ ಶಾಸಕರು ಅಸಮಾಧಾನಗೊಂಡಿದ್ದಾರೆ. ಪಾರ್ಟಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅವರಲ್ಲಿ ಹಾವೇರಿ ಮೀಸಲು ಕ್ಷೇತ್ರದ ಹಾಲಿ ಶಾಸಕ ನೆಹರೂ ಓಲೇಕಾರ್‌ ಕೂಡಾ ಒಬ್ಬರು. ಕಳೆದ ರಾತ್ರಿ ಬಿಡುಗಡೆಯಾದ ಪಟ್ಟಿಯಲ್ಲಿ ಓಲೇಕಾರ್‌ ಹೆಸರಿಲ್ಲ. ಹೀಗಾಗಿ ಅವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ್ದಾರೆ. ನನಗೆ ಟಿಕೆಟ್‌ ಮಿಸ್‌ ಆಗೋದಕ್ಕೆ ಸಿಎಂ ಬೊಮ್ಮಾಯಿಯೇ ಕಾರಣ ಎಂದು ಹೇಳಿದ್ದಾರೆ.

ಹಾವೇರಿ ಕ್ಷೇತ್ರಕ್ಕೆ ಹಾಲಿ ಶಾಸಕರಿಗೆ ಟಿಕೆಟ್‌ ತಪ್ಪಿಸಿ ಗವಿಸಿದ್ದಪ್ಪ ದ್ಯಾಮಣ್ಣನವರ್‌ಗೆ ಟಿಕೆಟ್‌ ನೀಡಲಾಗಿದೆ. ಇದರಿಂದಾಗಿ ಹಾಲಿ ಶಾಸಕ ನೆಹರೂ ಓಲೇಕಾರ್‌ ಆಕ್ರೋಶಗೊಂಡಿದ್ದಾರೆ. ಟಿಕೆಟ್‌ ಕೈತಪ್ಪುವುದಕ್ಕೆ ಸಿಎಂ ಕಾರಣ ಎಂದಿರುವ ಓಲೇಕಾರ್‌, ಅವನ ಕ್ಷೇತ್ರದಲ್ಲಿ ಚುನಾವಣೆ ಹೇಗೆ ಮಾಡುತ್ತಾನೆ ನೋಡುತ್ತೇನೆ ಎಂದು ಏಕವಚದಲ್ಲೇ ಸಿಎಂಗೆ ಬೈದಿದ್ದಾರೆ. ಅಷ್ಟೇ ಅಲ್ಲ, ಹಾವೇರಿ ಜಿಲ್ಲೆಯಲ್ಲಿ ಸಿಎಂ ಎಷ್ಟು ಸೀಟು ಗೆಲ್ಲಿಸುತ್ತಾನೆ ನೋಡುತ್ತೇನೆ. ಯಡಿಯೂರಪ್ಪ ಹೆಸರಿನಲ್ಲಿ ಸಿಎಂ ಆಗ ಬೊಮ್ಮಾಯಿ, ಯಡಿಯೂರಪ್ಪ ಅವರಿಗೇ ಮೋಸ ಮಾಡಿದ್ದಾನೆ ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದಾರೆ.

Share Post