BengaluruPolitics

ಬೊಮ್ಮಾಯಿಯವರು ಹೇಳಿದವರ ಪರ ಪ್ರಚಾರ ಮಾಡ್ತೀನಿ; ನಟ ಸುದೀಪ್‌

ಬೆಂಗಳೂರು; ನನ್ನ ಕಷ್ಟದ ದಿನಗಳಲ್ಲಿ ಹಲವರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಅದರಲ್ಲಿ ಬಸವರಾಜ ಬೊಮ್ಮಾಯಿಯವರೂ ಒಬ್ಬರು. ಅವರು ಬೆಂಬಲ ಕೊಡುವಂತೆ ಕೇಳಿದ್ದಾರೆ. ಹೀಗಾಗಿ ನಾನು ಅವರಿಗೆ ಬೆಂಬಲವಾಗಿ ನಿಂತಿದ್ದೇನೆ ಎಂದು ನಟ ಸುದೀಪ್‌ ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಅಂಕಲ್‌ ಅವರು ನನಗೆ ಕಷ್ಟದ ದಿನಗಳಲ್ಲಿ ನೆರವಾಗಿದ್ದಾರೆ. ಈ ಕಾರಣಕ್ಕಾಗಿ ಅವರಿಗೆ ಬೆಂಬಲಿಸುತ್ತಿದ್ದೇವೆ. ಅವರು ಯಾರ ಪರವಾಗಿ ಪ್ರಚಾರ ಮಾಡಿ ಎಂದರೂ ಮಾಡುತ್ತೇನೆ ಎಂದು ಹೇಳಿದರು.

ಬೊಮ್ಮಾಯಿಯವರನ್ನು ನಾನು ಚಿಕ್ಕವನಿಂದಲೇ ನೋಡಿದ್ದೇನೆ. ಅವರು ನನ್ನ ಪರವಾಗಿ ನಿಂತಿದ್ದರು. ನಾನು ಅವರ ಪರವಾಗಿ ನಿಲ್ಲುತ್ತಿದ್ದೇನೆ. ಅವರು ಬಿಜೆಪಿ ಪಕ್ಷವಲ್ಲ, ಇವರು ಬೇರೆ ಪಕ್ಷದಲ್ಲಿದ್ದರೂ ಬೆಂಬಲಕ್ಕೆ ನಿಲ್ಲುತ್ತಿದ್ದೇನೆ ಎಂದು ಸುದೀಪ್‌ ಹೇಳಿದ್ದಾರೆ. ನಾನು ಯಾವುದೇ ಕಾರಣಕ್ಕೂ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ನಾನು ಚುನಾವಣೆಗೆ ನಿಲ್ಲಬೇಕು ಅಂದುಕೊಂಡರೆ ನೇರವಾಗಿ ಹೇಳೀ ಬರುತ್ತೇನೆ. ಅನಿವಾರ್ಯ ಕಾರಣಕ್ಕೆ ನಾನು ಚುನಾವಣೆಗೆ ನಿಲ್ಲೋದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸುದೀಪ್‌ ಉತ್ತರಿಸಿದರು.

ನಾನು ಎಲ್ಲಾ ಕ್ಷೇತ್ರಗಳಲ್ಲೂ ಹೋಗಿ ಪ್ರಚಾರ ಮಾಡೋದಕ್ಕೆ ಆಗೋದಿಲ್ಲ. ಬೊಮ್ಮಾಯಿಯವರು ಸೂಚಿಸಿದ ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ. ಆದ್ರೆ ಎಲ್ಲಿ ಹೋಗಬೇಕು, ಹೇಗೆ ಪ್ರಚಾರ ನಡೆಸಬೇಕು ಎಂಬುದರ ಬಗ್ಗೆ ಇನ್ನೂ ಬೊಮ್ಮಾಯಿಯವರ ಜೊತೆ ಮಾತುಕತೆಯಾಗಿಲ್ಲ. ಬಿಜೆಪಿಗೆ ನಿಮ್ಮ ಬೆಂಬಲ ಬೇಕು ಎಂದು ಬೊಮ್ಮಾಯಿಯವರು ಕೇಳಿದ್ದಾರೆ. ಅವರು ಸೂಚಿಸಿದಂತೆ ನಡೆಯುತ್ತೇನೆ ಎಂದು ಸುದೀಪ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Share Post