Bengaluru

ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಮಾನವೀಯ ಕಾರ್ಯ; ಶ್ಲಾಘನೆ

ಬೆಂಗಳೂರು; ಕೆಲ ದಿನಗಳಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದೆ. ರಸ್ತೆಗಳಲ್ಲೆಲ್ಲಾ ನೀರು ನದಿಯಂತೆ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಸಾರಿಗೆ ಬಸ್‌ಗಳನ್ನು ಚಾಲನೆ ಮಾಡುವವರು ದೊಡ್ಡ ಸವಾಲುಗಳನ್ನು ಎದುರಿಸುತ್ತಾರೆ. ಒಮ್ಮೊಮ್ಮೆ ತಮ್ಮ ಜೀವವನ್ನೇ ಪಣಕ್ಕಿಟ್ಟು, ಪ್ರಯಾಣಿಕರ ಹಿತ ಕಾಪಾಡುತ್ತಾ ಬಂದಿದ್ದಾರೆ. ಇಂತಹ ಸಿಬ್ಬಂದಿಯನ್ನು ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್‌ ಅಭಿನಂದಿಸಿದ್ದಾರೆ.

ಆಗಸ್ಟ್‌ 29ರಂದು ರಾಮನಗರ ಮೈಸೂರು – ಬೆಂಗಳೂರು ಹೆದ್ದಾರಿ ಅಕ್ಷರಶಃ ನೀರಿನಿಂದ ಮುಳುಗಿತ್ತು. ವಾಹನ ಸಂಖ್ಯೆ ಕೆಎ42-ಎಫ್0502 ಅನುಸೂಚಿ ಸಂಖ್ಯೆ-117 (ಉರಗಹಳ್ಳಿ – ರಾಮನಗರ) ಮಾರ್ಗದಲ್ಲಿ ಚಾಲನೆಯಲ್ಲಿದ್ದಾಗ, ರಾಮನಗರ ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್ ನಲ್ಲಿ ಬರುತ್ತಿದ್ದ ಬಸ್ಸು ಮಳೆ ನೀರಿಗೆ ಸಿಲುಕಿ ಮುಳುಗಡೆಯಾಗಿತ್ತು. ಸ್ವಲ್ಪ ಮುಂದೆ ಇದೇ ಮಾರ್ಗದಲ್ಲಿ ಮತ್ತೊಂದು ಖಾಸಗಿ ವಾಹನ ಕೆಟ್ಟು ನಿಂತಿದ್ದರಿಂದ ಬಸ್ಸನ್ನು ಮುಂದೆ ಚಲಾಯಿಸಲು ಸಾಧ್ಯವಾಗಲೇ ಇಲ್ಲ. ಈ ಸಂದರ್ಭದಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಸಾರ್ವಜನಿಕರ ಸಹಾಯದೊಂದಿಗೆ ಸುರಕ್ಷಿತವಾಗಿ ರಕ್ಷಿಸಿ, ನೀರಿನ ಮಟ್ಟ ಜಾಸ್ತಿಯಾಗುತ್ತಿದ್ದರೂ, ತಮಗೆ ಈಜಲು ಬಾರದಿದ್ದರೂ ಸಹ ಎದೆಗುಂದಲಿಲ್ಲ. ಧೈರ್ಯದಿಂದ ತಮ್ಮ ಪ್ರಾಣವನ್ನೂ ಲೆಕ್ಕಿಸದೆ , ಆ ಸಮಯದಲ್ಲಿ ಏಣಿಯನ್ನು ಹುಡುಕಿ ತಂದು, ಚಾಲಕ.ಕಂ.ನಿರ್ವಾಹಕ ಲಿಂಗರಾಜು, ಹಾಗೂ ವೆಂಕಟೇಶ್‌ ಓರ್ವ ವೃದ್ದ ಮಹಿಳೆ ಸೇರಿ ಹಲವು ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಿಸಿದ್ದರು.

ಇವರು ಕೇಂದ್ರ‌ ಕಛೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ನಡೆದ ಘಟನೆಯನ್ನು ವಿವರಿಸಿದ್ದರು. ಈಜು ಬರದ ನಾವಿಬ್ಬರೂ, ಬಸ್ಸಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಉಳಿಸಲು ಕಷ್ಟಪಟ್ಟಿದ್ದೇವೆ. ಅದೇ ರೀತಿ ಪ್ರಯಾಣಿಕರು ಕೂಡ ನಮ್ಮನ್ನು ಉಳಿಸಿದರು.  ಈ ಸಂದರ್ಭದಲ್ಲಿ ತಮ್ಮ ಮೊಬೈಲ್ ಫೋನ್‌ಗಳು ಕೂಡ ನೀರು ತುಂಬಿ ಹಾಳಾಯಿತು. ಯಾವ ಅಧಿಕಾರಿಗಳನ್ನು ಸಂರ್ಪಕಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ನಮಗೆ ಆ ಸಮಯದಲ್ಲಿ ನಮ್ಮ ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಬೇಕೆಂಬುದು ಮಾತ್ರ ಉದ್ದೇಶವಾಗಿತ್ತೆಂದು ತಿಳಿಸಿದರು. ಈ ಮಾತನ್ನು ಕೇಳಿದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ರವರು ಚಾಲಕರನ್ನು ಮನತುಂಬಿ ಹಾರೈಸಿದರು. ತಮ್ಮ ಈ ಉತ್ಕೃಷ್ಟ ಕಾರ್ಯತತ್ಪರತೆ ಇತರರಿಗೆ ಮಾದರಿ ಹಾಗೂ ಸ್ಫೂರ್ತಿದಾಯಕವಾಗಿದೆ ಎಂದು ಅಭಿನಂದಿಸಿ, ಇಬ್ಬರಿಗೂ ಒಂದೊಂದು ಸ್ಮಾರ್ಟ್ ಫೋನ್ ಅನ್ನು ನಿಗಮದ ವತಿಯಿಂದ ಉಡುಗೊರೆಯಾಗಿ ನೀಡಿದರು.

 

Share Post