BengaluruCinema

50 ರೂಪಾಯಿಗಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು; ಐವತ್ತು ರೂಪಾಯಿಗಾಗಿ ಸ್ವೇಹಿತರ ನಡುವೆ ಜಗಳ ನಡೆದಿದ್ದು, ಇದು ತಾರಕಕ್ಕೇರಿ ಓರ್ವ ಹತನಾಗಿರುವ ಘಟನೆ ಬೆಂಗಳೂರಿನ ಕುರುಬರಹಳ್ಳಿ ಸರ್ಕಲ್‌ ಬಳಿ ಕಳೆದ ರಾತ್ರಿ ನಡೆದಿದೆ. 24 ವರ್ಷದ ಶಿವಮಾಧು ಕೊಲೆಯಾದ ಯುವಕ. ಈತನ ಸ್ನೇಹಿತ ಶಾಂತಕುಮಾರ್ ಎಂಬಾತನೇ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಕೊಲೆಯಾದ ಶಿವಮಾಧು ಮತ್ತು ಆರೋಪಿ ಶಾಂತಕುಮಾರ್ ಚಿಕ್ಕಂದಿನಿಂದ ಒಟ್ಟಿಗೆ ಆಡಿ ಬೆಳೆದವರು. ಆರೋಪಿ ಶಾಂತಕುಮಾರ್‌ ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಕೊಲೆಯಾದ ಶಿವಮಾಧು ಆಟೋ ಚಾಲಕನಾಗಿದ್ದ. ಎಂದಿನಂತೆ ಮಂಗಳವಾರ ಕುರುಬರಹಳ್ಳಿ ಸರ್ಕಲ್ ಕಡೆ ಬಂದಿದ್ದ ಶಿವಮಾಧು, ಶಾಂತಕುಮಾರ್ ಮತ್ತು ಸ್ನೇಹಿತರು ಹತ್ತಿರದ ಮೈದಾನವೊಂದರಲ್ಲಿ ​​ಕ್ರಿಕೆಟ್ ಆಡಲು ಹೋಗಿದ್ದಾರೆ. ಕ್ರಿಕೆಟ್ ಆಡಿ ಬಂದವರೇ ಏನೋ ಕೆಲಸಕ್ಕೆಂದು ರಾತ್ರಿ 8.30ರ ಸುಮಾರಿಗೆ ಸರ್ಕಲ್ ಬಳಿಯಿರುವ ಸೈಬರ್ ಸೆಂಟರ್​​​ವೊಂದಕ್ಕೆ ಹೋಗಿದ್ದರು.

ಈ ವೇಳೆ ಶಾಂತಕುಮಾರ್ ಜೇಬಿನಿಂದ ಶಿವಮಾಧು 50 ರೂಪಾಯಿ ತೆಗೆದುಕೊಂಡಿದ್ದಾನೆ. ಆಗ ಯಾಕೆ ತೆಗೆದುಕೊಂಡೆ, ಅದನ್ನು ಕೊಡು ಅಂತಾ ಕೇಳಿದ್ದ ಶಾಂತಕುಮಾರ್​​ಗೆ ಕೊಡಲ್ಲ ಏನಿವಾಗ ಎಂದು ಶಿವಮಾಧು ಸ್ನೇಹದ ಸಲುಗೆಯಲ್ಲೇ ಹೇಳಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದ್ದು, ಜೊತೆಯಲ್ಲೇ ತಂದಿದ್ದ ಚಾಕು ತೆಗೆದುಕೊಂಡು ಆರೋಪಿ ಶಾಂತಕುಮಾರ್, ಶಿವಮಾಧು ಎದೆಗೆ ಚುಚ್ಚಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಶಿವಮಾಧುನನ್ನು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಆತ ಸಾವನ್ನಪ್ಪಿದ್ದಾನೆ.

Share Post