BengaluruCrime

ಚಿಕಿತ್ಸೆಗೆಂದು ಬಂದ ಯುವತಿಗೆ ವೈದ್ಯನಿಂದ ಕಿರುಕುಳ

ಬೆಂಗಳೂರು; ಚಿಕಿತ್ಸೆಗೆಂದು ಬಂದಿದ್ದ ಯುವತಿಗೆ ಉಬೇದುಲ್ಲಾ ಎಂಬ ವೈದ್ಯ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಅರುಂಧತಿ ನಗರದಲ್ಲಿ ನಡೆದಿದೆ. ಯುವತಿಯ ಪೋಷಕರು ಕ್ಲಿನಿಕ್‌ನ್ನು ಧ್ವಂಸ ಮಾಡಿದ್ದು, ಆರೋಪಿ ಪರಾರಿಯಾಗಿದ್ದಾನೆ.

  ತನ್ನ ಅಜ್ಜಿಯ ಜೊತೆ 19 ವರ್ಷದ ಯುವತಿ ಚಿಕಿತ್ಸೆಗೆಂದು ಕ್ಲಿನಿಕ್‌ಗೆ ಬಂದಿದ್ದಳು. ಹೊಟ್ಟೆ ನೋವಿಗೆ ಚಿಕಿತ್ಸೆ ನೀಡುತ್ತೇನೆಂದು ಬೆಡ್‌ ಮೇಲೆ ಮಲಗಿಸಿದ ವೈದ್ಯ, ಆಕೆಗೆ ಮೈಕೈ ಮುಟ್ಟಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ ಯುವತಿಗೆ ನೀನು ಮೇಲೆದ್ದರೆ ಗ್ಲೂಕೋಸ್ ಹಾಕಿದ ಕೈಯಿಂದ ರಕ್ತ ಬರುತ್ತದೆ ಎಂದು ಹೆದರಿಸಿದ್ದಾನೆ. ಅಲ್ಲದೇ ಇಲ್ಲಿ ನಡೆದ ವಿಷಯವನ್ನು ಯಾರಿಗಾದರೂ ಹೇಳಿದರೆ ಸರಿ ಇರಲ್ಲ ಎಂದು ಹೆದರಿಸಿ ಮನೆಗೆ ಕಳಿಸಿದ್ದಾನೆ. ವೈದ್ಯನಿಗೆ ಹೆದರಿ ಯುವತಿ ಯಾರಿಗೂ ಹೇಳದೆ ಸುಮ್ಮನಿದ್ದಳು. ನಂತರ ಘಟನೆಯಿಂದ ಭೀತಿಗೊಂಡಿದ್ದ ಯುವತಿಗೆ ಮತ್ತೆ ಜ್ವರ ಕಾಣಿಸಿಕೊಂಡಿತ್ತು.

ಈ ವೇಳೆ ಕುಟುಂಬಸ್ಥರು ಆಸ್ಪತ್ರೆಗೆ ಹೋಗೋಣ ಎಂದು ಮತ್ತೆ ಉಬೇದುಲ್ಲಾನ ಕ್ಲಿನಿಕ್​ಗೆ ಕರೆದೊಯ್ಯಲು ಮುಂದಾಗಿದ್ದರು. ಈ ವೇಳೆ, ಹೆದರಿದ ಯುವತಿ ಆ ಕ್ಲಿನಿಕ್ ಬರುವುದಿಲ್ಲ ಎಂದಿದ್ದಾಳೆ. ಯುವತಿಯ ಅಣ್ಣಂದಿರುವ ಕಾರಣ ಕೇಳಿದಾಗ ಯುವತಿ ಕಾಮುಕನ ಅಸಲಿ ಕಹಾನಿಯನ್ನು ತರೆದಿಟ್ಟಿದ್ದಾಳೆ.

ಇದರಿಂದ ಆಕ್ರೋಶಗೊಂಡ ಯುವತಿಯ ಸಹೋದರರು ಅರುಂಧತಿ ನಗರದಲ್ಲಿರುವ ಕ್ಲಿನಿಕ್ ಧ್ವಂಸಗೊಳಿಸಿದ್ದಾರೆ. ಕಾಮುಕ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ಯುವತಿಯ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

Share Post