BengaluruNationalPolitics

ದೆಹಲಿಯಲ್ಲಿ ದೇವೇಗೌಡ-ಅಮಿತ್‌ ಶಾ ರಹಸ್ಯ ಭೇಟಿ; ಜೆಡಿಎಸ್‌-ಬಿಜೆಪಿ ಮೈತ್ರಿ ಪಕ್ಕಾ ಆಯ್ತಾ..?

ಬೆಂಗಳೂರು; ಲೋಕಸಭಾ ಚುನಾವಣೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಲೋಕಸಭಾ ಚುನಾವಣೆಗೆ ಇನ್ನೂ ಏಳು ತಿಂಗಳು ಬಾಕಿ ಇದೆ. ಆದ್ರೆ ಆಗಲೇ ದೇಶದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇನ್ನು ಕರ್ನಾಟಕದಲ್ಲಿ ಹೀನಾಯ ಸೋಲಿನಿಂದಾಗಿ ಕಂಗೆಟ್ಟಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸಲು ಮುಂದಾಗಿದೆ. ಅದಕ್ಕಾಗಿ ಬಿಜೆಪಿ ಹೈಕಮಾಂಡ್‌ ಕರ್ನಾಟಕ ರಾಜಕೀಯದ ಬಗ್ಗೆ ವಿಪರೀತವಾಗಿ ತಲೆಕೆಡಿಸಿಕೊಂಡಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡು, ಕರ್ನಾಟಕದಲ್ಲಿ ಈ ಬಾರಿಯೂ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲೋದಕ್ಕೆ ಬಿಜೆಪಿ ಪ್ಲ್ಯಾನ್‌ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿನ ಚಾಣಕ್ಯ ಎಂದೇ ಕರೆಯಲಾಗುವ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಪರೇಷನ್‌ ಹಸ್ತ ಶುರು ಮಾಡಿದೆ. ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹಾರಲು ರೆಡಿಯಾಗಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ, ದೆಹಲಿ ಬಿಜೆಪಿ ಹೈಕಮಾಂಡ್‌ ಕರ್ನಾಟಕ ರಾಜಕಾರಣಕ್ಕೆ ಎಂಟ್ರಿ ಪಡೆದುಕೊಂಡಿದೆ. ಅಮಿತ್‌ ಶಾ ಅವರೇ ಖುದ್ದಾಗಿ ಕರ್ನಾಟಕ ರಾಜಕಾರಣವನ್ನು ಗಮನಿಸುತ್ತಿದ್ದು, ಮೆಗಾ ಪ್ಲ್ಯಾನ್‌ ರೆಡಿ ಮಾಡುತ್ತಿದ್ದಾರೆ. ಇದರ ಭಾಗವಾಗಿ ದೆಹಲಿಯಲ್ಲಿ ಅಮಿತ್‌ ಶಾ ಅವರು  ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ.  ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌  ಪಕ್ಷಕ್ಕೆ ಮಾಸ್ಟರ್‌ಸ್ಟ್ರೋಕ್ ಕೊಡಲೆಂದೇ ಈ ಭೇಟಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ನಾಯಕರ ರಹಸ್ಯ ಮಾತುಕತೆ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಚರ್ಚೆ ಶುರುವಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಖುದ್ದಾಗಿ ದೇವೇಗೌಡರನ್ನ ಹುಡುಕಿಕೊಂಡು ಹೋಗಿ ಮಾತನಾಡಿದ್ದಾರೆ.  ಲೋಕಸಭಾ ಚುನಾವಣೆಯ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.  ಮೈತ್ರಿ ಮಾತುಕತೆ ನಡೆದಿದ್ದು, ಅಧಿಕೃತವಾಗಿ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಸೀಟು ಹಂಚಿಕೆ, ಘೋಷಣೆ ಯಾವುದೂ ಅಧಿಕೃತವಾಗಿ ಮಾಡದೇ, ಅನಧಿಕೃತವಾಗಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

 

Share Post