BengaluruPolitics

ಕೊನೆಗೂ ಮೌನ ಮುರಿದ ಸಿ.ಎಂ.ಇಬ್ರಾಹಿಂ; ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಏನಂದ್ರು ಗೊತ್ತಾ..?

ಬೆಂಗಳೂರು; ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ನನ್ನ ಜೊತೆ ಕುಮಾರಸ್ವಾಮಿಯವರಾಗಲೀ, ದೇವೇಗೌಡರಾಗಲೀ ಮಾತುಕತೆ ನಡೆಸಿಲ್ಲ ಅಂತ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿದ್ದಾರೆ. ಬಿಜೆಪಿ ಜೆಡಿಎಸ್‌ ಮೈತ್ರಿ ನಂತರ ಇದೇ ಮೊದಲ ಬಾರಿಗೆ ಅವರು ಮೌನ ಮುರಿದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಜೆಡಿಎಸ್‌ ಪಕ್ಷದ ಅಧ್ಯಕ್ಷ. ನೀವು ದೆಹಲಿಗೆ ಹೋದಿರಿ, ನನಗೆ ಒಂದು ಮಾತೂ ಹೇಳಿಲ್ಲ. ಏನು ಚರ್ಚೆ ಮಾಡಿದ್ದೀರಿ, ಈವರೆಗೆ ಅದರ ಬಗ್ಗೆಯೂ ಮಾಹಿತಿ ಬಂದಿಲ್ಲ. ಮೈತ್ರಿ ಎಲ್ಲಿ ಆಗಿದೆ? ನಾನು ಪಕ್ಷದ ಅಧ್ಯಕ್ಷ, ಪಕ್ಷದಲ್ಲಿ ಎಲ್ಲಿ ಚರ್ಚೆ ಆಗಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಚರ್ಚೆ ಆಗಿ ನಿರ್ಣಯ ಆದ ಮೇಲೆ ರಾಜ್ಯಾಧ್ಯಕ್ಷನಾಗಿ ನಾನು ಸಹಿ ಹಾಕಬೇಕು. ಅದು ಎಲ್ಲಿ ಆಗಿದೆ ಎಂದು ಸಿಎಂ ಇಬ್ರಾಹಿಂ ಅಸಾಮಾಧಾನ ಹೊರಹಾಕಿದ್ದಾರೆ.

ಅಕ್ಟೋಬರ್ 16ರಂದು ನಡೆಯುವ ಸಭೆಯ ಬಳಿಕ ಪಕ್ಷದ ವರಿಷ್ಠ ಹೆಚ್​​ಡಿ ದೇವೇಗೌಡರು, ಕುಮಾರಸ್ವಾಮಿ ಜೊತೆ ಮಾತಾಡುತ್ತೇನೆ. ಶರದ್ ಪವಾರ್  ನನ್ನ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೊಂದಡೆ ದೆಹಲಿಯಿಂದ ಕಾಂಗ್ರೆಸ್ ನಾಯಕರು ಕೂಡಾ ಮಾತಾಡಿದ್ದಾರೆ. ಆದ್ರೆ ಸಿದ್ದರಾಮಯ್ಯ ಜೊತೆ ಏನೂ ಮಾತುಕತೆ ಮಾಡಿಲ್ಲ ಎಂದು ಇಬ್ರಾಹಿಂ ಇದೇ ವೇಳೆ ಹೇಳಿದ್ದಾರೆ.

 

 

Share Post