Bengaluru

ಇಂದಿನಿಂದ ಕಾರ್ಮಿಕ ಸಂಘಟನೆಗಳ ಮುಷ್ಕರ; ಬ್ಯಾಂಕ್‌ ಸೇವೆಯಲ್ಲೂ ವ್ಯತ್ಯಯ

ಬೆಂಗಳೂರು: ಇಂದು ಮತ್ತು ನಾಳೆ ವಿವಿಧ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಮುಷ್ಕರ ನಡೆಸುತ್ತಿವೆ. ಇದಕ್ಕೆ ಕೆಲ ಬ್ಯಾಂಕ್‌ಗಳ ನೌಕರರು ಕೂಡಾ ಸಾಥ್‌ ನೀಡಿದ್ದಾರೆ. ಇದರಿಂದಾಗಿ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್​ಗಳಲ್ಲಿ ವಹಿವಾಟಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಬ್ಯಾಂಕ್‌ಗಳ ಖಾಸಗೀಕರಣ ನಿಲ್ಲಿಸಬೇಕು ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬ್ಯಾಂಕ್​ಗಳ ನೌಕರರು ಒತ್ತಾಯಿಸುತ್ತಿದ್ದಾರೆ. ಇತರ ಸಂಘಟನೆಗಳೂ ಮುಷ್ಕರ ಕರೆಗೆ ಓಗೊಟ್ಟಿದ್ದು, ಸರ್ಕಾರ ಖಾಸಗೀಕರಣವನ್ನು ನಿಲ್ಲಿಸಬೇಕು, ಉದ್ಯೋಗ ಖಾತ್ರಿ ವೇತನ ಹೆಚ್ಚಿಸಬೇಕು ಮತ್ತು ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿವೆ.

ಕಾರ್ಮಿಕರು, ರೈತರು ಮತ್ತು ಜನರ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಎಸ್ಮಾ ಬೆದರಿಕೆಯ ನಡುವೆಯೂ ರಸ್ತೆ ಸಾರಿಗೆ ನೌಕರರು ಮತ್ತು ವಿದ್ಯುತ್ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ ಹಣಕಾಸು ವಲಯಗಳು ಮುಷ್ಕರಕ್ಕೆ ಸೇರುತ್ತಿವೆ ಎಂದು ಅದು ಹೇಳಿದೆ.

ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ, ಬ್ಯಾಂಕ್‌ಗಳು, ವಿಮೆ ಮುಂತಾದ ವಲಯಗಳ ಒಕ್ಕೂಟಗಳು ಮುಷ್ಕರ ನಡೆಸಲು ತಮ್ಮ ಕಾರ್ಮಿಕರಿಗೆ ಸೂಚನೆ ನೀಡಿವೆ. ರೈಲ್ವೆ ಮತ್ತು ರಕ್ಷಣಾ ವಲಯದ ಒಕ್ಕೂಟಗಳು ನೂರಾರು ಸ್ಥಳಗಳಲ್ಲಿ ಮುಷ್ಕರವನ್ನು ಬೆಂಬಲಿಸಲು ಮುಂದಾಗಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಕ್ರಮ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳು ಮುಷ್ಕರಕ್ಕೆ ಕರೆ ನೀಡಿವೆ.

 

Share Post