BengaluruPolitics

ರಾಜ್ಯದ ಆನೆಗಳ ಸಂಖ್ಯೆಯಲ್ಲಿ 350ರಷ್ಟು ಹೆಚ್ಚಳ: ಈಶ್ವರ ಖಂಡ್ರೆ

ಬೆಂಗಳೂರು; ರಾಜ್ಯದ ಆನೆಗಳ ಸಂಖ್ಯೆಯಲ್ಲಿ ಸುಮಾರು 350ರಷ್ಟು ಹೆಚ್ಚಳವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆನೆಗಳ ಗಣತಿಯ ವರದಿ ಬಿಡುಗಡೆ ಮಾಡಿದ ಅವರು, 2017ರಲ್ಲಿ ರಾಜ್ಯದಲ್ಲಿ ಸುಮಾರು 6049 ಆನೆಗಳಿದ್ದವು, ಈಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು, ಸುಮಾರು 350ರಷ್ಟು ಹೆಚ್ಚಳವಾಗಿದೆ ಎಂದರು.

ಆನೆಗಳು ಬಲಿಷ್ಠ ವನ್ಯಜೀವಿಯಾದರೂ ಭಾರತ ಸೇರಿದಂತೆ ವಿಶ್ವಾದ್ಯಂತ ಅಪಾಯದಲ್ಲಿವೆ. ಅವಸಾನದ ಅಂಚಿನಲ್ಲಿರುವ ಆನೆಗಳನ್ನು ಸಂರಕ್ಷಿಸುವ ಸಲುವಾಗಿ, ಆನೆಗಳಿಗೂ ನೆಮ್ಮದಿಯಿಂದ ಬದುಕಲು ಅವುಗಳ ಆವಾಸಸ್ಥಾನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು 2012 ಆಗಸ್ಟ್ 12 ರಿಂದ ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಆನೆಗಳ ದಿನದಂದು ದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ ಅಥವಾ ಇಳಿಮುಖವಾಗಿದೆಯೇ ಎಂದು ತಿಳಿಯಲು ಆನೆಗಳ ಗಣತಿಯನ್ನು ಪ್ರತೀ ಐದು ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಈ ಹಿಂದೆ ಆನೆ ಗಣತಿ 2017 ರಲ್ಲಿ ನಡೆದಿತ್ತು. ಬಳಿಕ 2022ರಲ್ಲಿ ಆನೆ ಗಣತಿಯನ್ನು ಅಖಿಲ ಭಾರತ ಹುಲಿ ಗಣತಿಯ ಭಾಗವಾಗಿ ಮಾಡಲು ಪ್ರಯತ್ನಿಸಲಾಯಿತು. ಆದರೆ ಈ ಸಮೀಕ್ಷೆಯು ಮಾದರಿ ಬ್ಲಾಕ್‌ ಏಣಿಕೆ (Sample Block Count) ಮತ್ತು ಆನೆಗಳ ಸಂಖ್ಯೆ ಸ್ವರೂಪದ (Population Structure) ಮೌಲ್ಯ ಮಾಪನವನ್ನು ಒಳಗೊಂಡಿರಲಿಲ್ಲ. ಈ ವಿಧಾನ ಆನೆಗಳ ಗಣತಿ ಮತ್ತು ಸಂಖ್ಯಾ ಸ್ವರೂಪ ಅಂದರೆ ಲಿಂಗ ಮತ್ತು ವಯಸ್ಸಿನ ವರ್ಗೀಕರಣ ಮಾಡಲು ಬಹಳ ಮುಖ್ಯವಾಗಿರುತ್ತದೆ ಎಂದರು.

ಕರ್ನಾಟಕ, ಕೇರಳ ಮತ್ತು ತಮಿಳುನಾಡು ಈ ಮೂರು ರಾಜ್ಯಗಳ ಮುಂದಾಳತ್ವದೊಂದಿಗೆ 2023ರ ಮೇ-17 ರಿಂದ ಮೇ-19 ರವರೆಗೆ ಏಕಕಾಲದಲ್ಲಿ ಆನೆಗಳ ಗಣತಿ ನಡೆಸಲಾಯಿತು. ಅದೇ ದಿನಾಂಕದಂದು ಆಂಧ್ರ ಪ್ರದೇಶದಲ್ಲೂ ಸಹ ಇದೇ ರೀತಿಯ ಗಣತಿ ಕಾರ್ಯವನ್ನು ನಡೆಸಲಾಯಿತು ಎಂದು ವಿವರಿಸಿದರು.

 

Share Post