CrimeInternational

ಕುವೈತ್‌ನಲ್ಲಿ ಬೆಂಕಿ ದುರಂತಕ್ಕೆ ಕಾರಣವಾಗಿದ್ದೇನು..?; ಆ ಕಟ್ಟಡದಲ್ಲಿ ಭಾರತೀಯರೇ ಹೆಚ್ಚಿರೋದು ಏಕೆ..?

ಕುವೈತ್‌ನ ಮಂಗಾಫ್ ಪ್ರದೇಶದ ಆರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 49 ಮಂದಿ ಸಾವನ್ನಪ್ಪಿದ್ದಾರೆ.. ಇದರಲ್ಲಿ ಬಹುತೇಕರು ಭಾರತದ ಕಾರ್ಮಿಕರೇ ಆಗಿದ್ದಾರೆ.. ಅಷ್ಟೇ ಈ ಕಟ್ಟಡ ಕೂಡಾ ಭಾರತೀಯ ಮೂಲದವರದ್ದೇ ಆಗಿದೆ..

ಈ ಬೆಂಕಿ ದುರಂತದಲ್ಲಿ ಸುಮಾರು 50 ಜನರು ಗಾಯಗೊಂಡಿದ್ದು, ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.. ಇನ್ನು ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಈ ದುರಂತದ ಸುದ್ದಿ ಕೇಳಿ ನನಗೆ ಆಘಾತವಾಗಿದೆ.. ನಾವು ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಗಾಯಾಳುಗಳು ಮತ್ತು ಸಂತ್ರಸ್ತ ಕುಟುಂಬಗಳ ನೆರವಿಗೆ ಧಾವಿಸುವ ಕ್ರಮ ಕೈಗೊಂಡಿದ್ದೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ ನಲ್ಲಿ ಬರೆದುಕೊಂಡಿದ್ದಾರೆ..

ಬುಧವಾರ ಬೆಳಗಿನ ಜಾವ ಮಂಗಾಫ್ ಪ್ರದೇಶದ ಆರು ಅಂತಸ್ತಿನ ಕಟ್ಟಡದ ಅಡುಗೆಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಈ ದುರಂತ ನಡೆದಿದೆ.. ಆಗ ಕಟ್ಟಡದಲ್ಲಿ 160 ಕಾರ್ಮಿಕರು ಇದ್ದರು. ಅವರೆಲ್ಲರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಕೇರಳ ಮೂಲದ ವ್ಯಕ್ತಿಯ ಮಾಲೀಕತ್ವದ ಕಟ್ಟಡದ ಇದಾಗಿದ್ದು, ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳದಿದ್ದುದೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ..

ಇನ್ನು ಇಲ್ಲಿ ತಮಿಳುನಾಡು ಮೂಲದ ಕಾರ್ಮಿಕರೇ ಹೆಚ್ಚಾಗಿದ್ದರು.. ಎಲ್ಲರೂ ಕೂಡಾ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ್ದರು ಎಂದು ತಿಳಿದುಬಂದಿದೆ.. ಅಲ್ಲಿದ್ದವರಿಗೆ ಬೆಂಕಿ ನಂದಿಸಲು ಸಾಧ್ಯವಾಗದೆ ಕೆಲವರು ಬೆಂಕಿಯಲ್ಲಿ ಸಿಲುಕಿಕೊಂಡರೆ ಇನ್ನು ಕೆಲವರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.. ಮೃತರಲ್ಲಿ ಹೆಚ್ಚಿನವರು ಭಾರತೀಯರಾಗಿದ್ದು, ತಮಿಳುನಾಡು ಮತ್ತು ಕೇರಳಕ್ಕೆ ಸೇರಿದವರು ಎಂದು ತಿಳಿದುಬಂದಿದೆ..

ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆ +965-65505246 ಅನ್ನು ಸ್ಥಾಪಿಸಿದೆ. ಸಂತ್ರಸ್ತ ಕುಟುಂಬದ ಸದಸ್ಯರು ಸಹಾಯಕ್ಕಾಗಿ ಈ ಸಹಾಯವಾಣಿಯನ್ನು ಸಂಪರ್ಕಿಸಬಹುದು. ಕುವೈತ್‌ನ ಜನಸಂಖ್ಯೆಯ ಮೂರನೇ ಎರಡರಷ್ಟು ಮಂದಿ ವಲಸೆ ಕಾರ್ಮಿಕರು. ಕುವೈತ್ ವಿದೇಶಿ ಉದ್ಯೋಗಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೆಚ್ಚಿನ ಜನರು ನಿರ್ಮಾಣ ಮತ್ತು ವಸತಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

 

Share Post