CrimeDistricts

ಪ್ರೀತಿಸುವಂತೆ ಯುವಕನಿಂದ ಪದೇಪದೇ ಟಾರ್ಚರ್‌; ಮನನೊಂದ ಯುವತಿ ಆತ್ಮಹತ್ಯೆ!

ಹಾಸನ; ಯುವಕನೊಬ್ಬ ಪದೇ ಪದೇ ಪ್ರೀತಿಸುವಂತೆ ಕಾಟ ಕೊಡುತ್ತಿದ್ದ. ನೋ ಎಂದರೂ ಎಲ್ಲರ ಮುಂದೆ ಪ್ರಾಣ ತಿಂದು ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದ ಯುವತಿಯೊಬ್ಬಳು ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಬೇಲೂರು ತಾಲ್ಲೂಕಿನ ನಿಡಗೂಡು ಗ್ರಾಮದಲ್ಲಿ ಜಯಣ್ಣ ಎಂಬವರ ಪುತ್ರಿ ಸಂಗೀತಾ (21) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಿಡಗೂಡು ಗ್ರಾಮದವನೇ ಆದ ಹೊನ್ನಯ್ಯ ಎಂಬುವವರ ಪುತ್ರ ಶಿವು ಎಂಬಾತ ಸಂಗೀತಾಗೆ ಪದೇ ಪದೇ ಕಾಟ ಕೊಡುತ್ತಿದ್ದ. ಅಷ್ಟೇ ಅಲ್ಲ, ಸಂಗೀತಾಳನ್ನು ತನಗೆ ಮದುವೆ ಮಾಡಿಕೊಡುವಂತೆ ಸಂಗೀತಾ ಪೋಷಕರ ಬಳಿಯೂ ಕೇಳಿಬಿಟ್ಟಿದ್ದ. ಆದ್ರೆ ಸಂಗೀತಾ ಪೋಷಕರು ಈಗಲೇ ನಮ್ಮ ಮಗಳಿಗೆ ಮದುವೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೂ ಆತ ಸಂಗೀತಾಳಿಗೆ ಪದೇಪದೇ ಕಾಟ ಕೊಡುತ್ತಿದ್ದ. ಎಲ್ಲರ ಮುಂದೆಯೇ ಚುಡಾಯಿಸುತ್ತಿದ್ದ ಎನ್ನಲಾಗಿದೆ.

ಜನವರಿ 11ರಂದು ಕೂಡಾ ಸಂಗೀತಾ ಗ್ರಾಮದ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಹೋಗಿದ್ದಳು. ಅಲ್ಲಿಗೆ ಬಂದಿದ್ದ ಆರೋಪಿ ಶಿವು, ಸಂಗೀತಾಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದನಂತೆ. ಫೋನ್‌ ಮಾಡಿದರೆ ರಿಸೀವ್‌ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿ ಆಕೆಯ ಮೇಲೆ ಹಲ್ಲೆ ಕೂಡಾ ಮಾಡಿದ್ದ. ನನ್ನನ್ನು ಮದುವೆಯಾಗದಿದ್ದರೆ ನೀನು ಸತ್ತುಹೋಗು ಎಂದು ಎಲ್ಲರ ಮುಂದೆ ಅವಮಾನ ಮಾಡಿದ್ದನಂತೆ.

ಇದೇ ನೋವಿನಲ್ಲಿದ್ದ ಸಂಗೀತಾ ಕಳೆದ ರಾತ್ರಿ ಆಕೆಯ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೇಲೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

 

Share Post