CrimeNational

ಕೊಲೆ ಆರೋಪಿಯನ್ನು ಎಲ್ಲರೆದುರೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು..!

ಜೈಪುರ್; ಕೊಲೆ ಆರೋಪಿಯನ್ನು ಬಸ್ಸಿನಲ್ಲಿ ವಿಚಾರಣೆಗೆ ಕೋರ್ಟ್‌ಗೆಂದು ಪೊಲೀಸರು ಕರೆದೊಯ್ಯುತ್ತಿದ್ದಾಗ, ದುಷ್ಕರ್ಮಿಗಳು ಆತನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಈ ಘಟನೆ ನಡೆದಿದೆ.

ಬಿಜೆಪಿ ನಾಯಕನೊಬ್ಬನನ್ನು ಹತ್ಯೆ ಮಾಡಿರುವ ಆರೋಪದಡಿ ಕುಲದೀಪ್‌ ಜಘೀನಾ ಎಂಬಾತನನ್ನು ಬಂಧಿಸಲಾಗಿತ್ತು. ಆತನನ್ನು ವಿಚಾರಣೆಗಾಗಿ ಪೊಲೀಸರು ಬಸ್‌ನಲ್ಲಿ ಕರೆದೊಯ್ಯುತ್ತಿದ್ದರು. ಬಸ್‌ ಭರತ್‌ಪುರದ ಅಮೋಲಿ ಟೋಲ್‌ ಪ್ಲಾಜಾ ಬಳಿ ಬಂದಾಗ ಕಾರು ಹಾಗೂ ಎರಡು ಬೈಕ್‌ಗಳಲ್ಲಿ ಬಂದ ೧೨ ಮಂದಿ, ಬಸ್‌ ಹತ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ ಆರೋಪಿಯ ಜೊತೆಗಿದ್ದ ಮತ್ತೊಬ್ಬ ಆರೋಪಿಗೂ ಗುಂಡು ತಗುಲಿದೆ. ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕುಲದೀಪ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪೊಲೀಸರ ಎದುರೇ ಇದೆಲ್ಲಾ ನಡೆದಿದೆ.

ಪೊಲೀಸರ ಕಣ್ಣಿಗೆ ಖಾರದಪುಡಿ ಎರಚಿ ಆರೋಪಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಬಸ್ಸಿನಲ್ಲಿ ಪ್ರಯಾಣಿಕರು ಇದ್ದಿದ್ದರಿಂದ ಅವರ ಹಿತದೃಷ್ಟಿಯಿಂದಾಗಿ ಪೊಲೀಸರು ಗುಂಡು ಹಾರಿಸಿಲ್ಲ.

ಕಳೆದ ವರ್ಷದ ಸೆಪ್ಟೆಂಬರ್ 4 ರಂದು ಭರತ್‍ಪುರದಲ್ಲಿ ಭೂ ವಿವಾದ ಹಿನ್ನೆಲೆಯಲ್ಲಿ ಕೃಪಾಲ್ ಜಘೀನಾ ಅವರನ್ನು ಕೊಲೆ ಮಾಡಲಾಗಿತ್ತು. ಇದರಲ್ಲಿ ಕುಲದೀಪ್ ಜಘೀನಾ ಮತ್ತು ವಿಜಯಪಾಲ್ ಭಾಗಿಯಾಗಿದ್ದರು ಎನ್ನಲಾಗಿದೆ.

 

Share Post