CrimeDistricts

ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಗೆ ವೃದ್ಧ ಸಾವು

ಹಾಸನ; ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದೆ. ಇಂದು ಕಾಡಾನೆಗಳ ದಾಳಿಗೆ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಸಕಲೇಶಪುರ ತಾಲ್ಲೂಕಿನ ಕೆಲಗಳಲೆ ಗ್ರಾಮದ ಕೃಷ್ಣೇಗೌಡ (67) ಮೃತ ವ್ಯಕ್ತಿ. ಬೆಳಿಗ್ಗೆ ಮಗ ಸುದೀಶ್, ಮೊಮ್ಮಗ ಪ್ರಥಮ್ ಜೊತೆ ತೋಟಕ್ಕೆ ತೆರಳುವ ವೇಳೆ ಏಕಾಏಕಿ ಮೂರು ಕಾಡಾನೆಗಳು ದಾಳಿ ಮಾಡಿವೆ. ಈ ವೇಳೆ ವೃದ್ಧ ಕೃಷ್ಣೇಗೌಡ ಸಾವನ್ನಪ್ಪಿದ್ದಾರೆ.

ಕಾಡಾನೆ ಹಿಂಡು ಕಂಡ ಕೂಡಲೇ ಎಲ್ಲರೂ ಓಡಿದ್ದಾರೆ. ಈ ವೇಳೆ ಕೃಷ್ಣೇಗೌಡ ಕೆಳಗೆ ಬಿದ್ದಿದ್ದಾರೆ. ಕಾಡಾನೆಗಳು ಕೃಷ್ಣೇಗೌಡರನ್ನು ತುಳಿದು ಸಾಯಿಸಿವೆ. ಸುದೇಶ್ ಮತ್ತು ಪ್ರಥಮ್ ತಪ್ಪಿಸಿಕೊಂಡಿದ್ದಾರೆ. ಸಾವಿಗೀಡಾದ ಕೃಷ್ಣೇಗೌಡ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಸಂಬಂಧಿಕರ ಆಕ್ರಂದನ ಮುಗಿಲು‌ ಮುಟ್ಟಿದೆ. ತೀವ್ರ ಆಕ್ರೋಶ ವ್ಯಕ್ತಪಡಿಸಿರುವ‌ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈಚೆಗಷ್ಟೇ ಒಂದು ಆನೆಯನ್ನು ಅರಣ್ಯ ಇಲಾಖೆಯಿಂದ ಸೆರೆಹಿಡಿಯಲಾಗಿತ್ತು. ಮತ್ತೊಂದು ಆನೆ ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರಿದಿದ್ದು, ಈ ನಡುವೆ ವೃದ್ಧನ ಸಾವು ಸಂಭವಿಸಿದೆ‌.

Share Post