Bengaluru

ಸೂಪರ್‌ ಅಧ್ಯಕ್ಷೆ & ಡಿಕೆಶಿ ಇಬ್ಬರೂ ಅಕ್ರಮಗಳ ಸರದಾರರು; ಬಿಜೆಪಿ ಟ್ವೀಟ್‌

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್‌ ಗುದ್ದಾಟ ಜೋರಾಗಿದೆ. ಈಶ್ವರಪ್ಪ ಅವರನ್ನು ಬಂಧಿಸಲೇಬೇಕೆಂದು ಕಾಂಗ್ರೆಸ್‌ ಹೋರಾಟ ಮುಂದುವರೆಸಿದ್ದರೆ, ಇತ್ತ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಹರಿಹಾಯುತ್ತಿದೆ. ಇಂದು ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌ ವಿರುದ್ಧ ಕಿಡಿಕಾರಲಾಗಿದೆ.

‘ಕೆಪಿಸಿಸಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕೆಪಿಸಿಸಿಯ ‘ಸೂಪರ್‌ ಅಧ್ಯಕ್ಷೆʼ ಇಬ್ಬರೂ ಅಕ್ರಮಗಳ ಸರದಾರರು. ಬೇನಾಮಿ ಅಧ್ಯಕ್ಷೆ ಬೇನಾಮಿ ಕಾಮಗಾರಿ ನಡೆಸುವುದರಲ್ಲೂ ಎತ್ತಿದ ಕೈ. ಕಾರ್ಯಾದೇಶ ಇಲ್ಲದ ಕಾಮಗಾರಿಗಳಿಗೆ ಕೋಟಿ ಕೋಟಿ ಸುರಿಯುವ ಧೈರ್ಯ ಖಂಡಿತವಾಗಿ ಒಬ್ಬ ಸಣ್ಣ ಗುತ್ತಿಗೆದಾರ ಮಾಡಲಾರ. ಇದರ ಹಿಂದೆ ಬೇನಾಮಿ ಅಧ್ಯಕ್ಷೆಯ ಕೈವಾಡವಿದೆ’ ಹೀಗಂತ ಬಿಜೆಪಿ ಟ್ವೀಟ್‌ ಮಾಡಿದೆ.

ಮತ್ತೊಂದು ಟ್ವೀಟ್‌ನಲ್ಲಿ ʻಕೆಪಿಸಿಸಿಯ ಬೇನಾಮಿ ಅಧ್ಯಕ್ಷೆಯ ಆಸ್ತಿ ಹೆಚ್ಚಳದ ಹಿಂದಿರುವ ವ್ಯಕ್ತಿ ಹಾಗೂ ಶಕ್ತಿ ಯಾರು? ಇವರ ಅಕ್ರಮದ ಆಚಾರ- ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಇದು ಸಕಾಲ. ಸಕ್ರಮ ಮಾರ್ಗದಲ್ಲಿ ಇಷ್ಟೊಂದು ಸಂಪತ್ತು ಗಳಿಸಲು ಸಾಧ್ಯವೇ..? ಎಂದು ಬಿಜೆಪಿ ಪ್ರಶ್ನಿಸಿದೆ. ವೋಟು, ನೋಟಿಗಾಗಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಹೊರಟ ಬೇನಾಮಿ ಅಧ್ಯಕ್ಷೆ ಇಂದು ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಅಕ್ರಮವನ್ನೇ ರಾಜಕಾರಣ ಎಂದುಕೊಂಡಿರುವ ಕೆಪಿಸಿಸಿಯ ಸೂಪರ್‌ ಅಧ್ಯಕ್ಷರೇ, ನಿಮ್ಮ ಅಕ್ರಮ ಆಸ್ತಿ ಲೆಕ್ಕ ಕೊಡುವಿರಾ ಎಂದು ಬಿಜೆಪಿ ಪ್ರಶ್ನಿಸಿದೆ.

Share Post