Uncategorized

ಪಿರಿಯಾಪಟ್ಟಣದಲ್ಲಿ ಖಾಸಗಿ ಶಾಲಾ ಬಸ್‌ಗೆ ಬೆಂಕಿ..!

ಮೈಸೂರು: ಶಾಲಾ ಮಕ್ಕಳನ್ನು ಕೊಂಡೊಯ್ಯುವ ಬಸ್‌ಗೆ ಬೆಂಕಿ ತಗುಲಿದ್ದು, ಕೆಲಕಾಲ ಭೀತಿ ಉಂಟು ಮಾಡಿದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿ ನಡೆದಿದೆ. ಮಕ್ಕಳನ್ನು ಶಾಲೆಗೆ ಕರೆತಂದಿದ್ದ ಬಸ್‌ ಚಾಲಕ, ಶಾಲೆ ಬಳಿ ಮಕ್ಕಳನ್ನು ಇಳಿಸಿದ್ದಾನೆ. ಇದಾದ ಕೆಲವೇ ಹೊತ್ತಿನಲ್ಲಿ ಬಸ್‌ ಹೊತ್ತಿ ಉರಿದಿದೆ. ಕೆಲ ನಿಮಿಷಗಳಿಗೆ ಮೊದಲು ಬಸ್‌ಗೆ ಬೆಂಕಿ ಬಿದ್ದಿದ್ದರೆ, ಶಾಲಾ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು. ಆದರೆ ಮಕ್ಕಳು ಇಳಿದ ಮೇಲೆ ಬೆಂಕಿ ಹೊತ್ತಿಕೊಂಡಿದ್ದರಿಂದ ಅದೃಷ್ಟವಶಾತ್‌ ಮಕ್ಕಳಿಗೆ ಯಾವುದೇ ತೊಂದರೆಯಾಗಿಲ್ಲ.

ಇನ್ನು ಬಸ್‌ ನಿಲ್ಲಿಸಿದ್ದ ಜಾಗ ಪಕ್ಕದಲ್ಲೇ ಇನ್ನಷ್ಟು ಶಾಲಾ ಬಸ್‌ಗಳು ಇದ್ದವು. ಹೀಗಾಗಿ ಬೇರೆ ಬಸ್‌ಗಳಿಗೂ ಬೆಂಕಿ ಹಬ್ಬುವ ಭೀತಿ ಉಂಟಾಗಿತ್ತು. ಆದರೆ, ಶಾಲಾ ಸಿಬ್ಬಂದಿ ನೀರು ಎರಚಿ ಬೆಂಕಿ ಬೇರೆಡೆ ಹಬ್ಬದಂತೆ ನೋಡಿಕೊಂಡರು. ನಂತರ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು. ಘಟನೆಯಲ್ಲಿ ಬಸ್‌ ಸಂಪೂರ್ಣವಾಗಿ ಸುಟ್ಟು ಕರಲಾಗಿದೆ. ಆದರೆ ಘಟನೆ ಕಾರಣ ಮಾತ್ರ ಇನ್ನೂ ತಿಳಿದುಬಂದಿಲ್ಲ.

Share Post