Politics

ʻಕೈʼ ನಾಯಕರು ಮೇಕೆದಾಟು ಮಕ್ಮಲ್‌ ಟೋಪಿ ಹಾಕಲು ಹೊರಟಿದ್ದಾರೆ: ಹೆಚ್‌ಡಿಕೆ

ಬೆಂಗಳೂರು: ಕಾಂಗ್ರೆಸ್‌ ನಾಯಕರು ಕೈಗೊಂಡಿರುವ ಮೇಕೆದಾಟು ಯೋಜನೆ ಅನುಷ್ಠಾನದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಆರೋಪದ ಹೊಳೆ ಹರಿಸುತ್ತಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಕೈಗೊಂಡಿರುವ ಹೋರಾಟ ಪಕ್ಷಾತೀತ. ಇದನ್ನು ಟೀಕೆ ಮಾಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷರು. ಅವರು ನನ್ನನ್ನೂ ಸೇರಿಸಿ 83 ತಾಲೂಕುಗಳ ಜನರಿಗೆ ʼಮೇಕೆದಾಟು ಮಕ್ಮಲ್ ಟೋಪಿʼ ಹಾಕಲು ಹೊರಟಿದ್ದಾರೆ ಎಂದು ಸರಣಿ ಟ್ವೀಟ್‌ ಮಾಡಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಶ್ರೀ ಹೆಚ್.ಡಿ.ದೇವೇಗೌಡರು ಕೊಟ್ಟ ಕಾಣಿಕೆ ಅಗಣಿತ. ತಮ್ಮ ಜೀವಿತಾವಧಿಯನ್ನೇ ಈ ನೆಲಕ್ಕೆ ನೀರರಿಸಲು ಮುಡಿಪಿಟ್ಟ ಭಗೀರಥರು ಅವರು. ಮೇಕೆದಾಟು ಯೋಜನೆಯ ಮೂಲ ರೂವಾರಿಯೇ ಅವರು. ಅವರನ್ನೇ ಮರೆತ ಕಾಂಗ್ರೆಸ್ ನಾಯಕರು ‘ಸತ್ಯಕ್ಕೆ ಸಮಾಧಿ’ ಕಟ್ಟುತ್ತಿದ್ದಾರೆ.

ಅವರಿಗೆ ಸತ್ಯ ಹೇಳಲು ನಾಲಿಗೆ ಹೊರಳುತ್ತದೆ. ಆದರೆ; ಸತ್ಯಕ್ಕೆ ನಾಲಿಗೆ ಪ್ರಮೇಯವೇ ಇಲ್ಲ. ಸತ್ಯ ಸತ್ಯವೇ. ದೇವೇಗೌಡರು ಅಂತಹ ‘ಸತ್ಯದ ಸಾಕ್ಷಿ’. ನೀರಾವರಿಗಾಗಿ ಅವರು ಅವಿರತವಾಗಿ ಶ್ರಮಿಸಿ ನಡೆದಾಡಿದ ನೆಲದ ಮಣ್ಣಿನಮಕ್ಕಳ ನಂಬಿಕೆಯನ್ನೇ ʼಬುಲ್ಡೋಜ್ʼ ಮಾಡುವಂಥ ರಾಜಕಾರಣ ʼಕೈʼ ಪಕ್ಷ ಮಾಡುತ್ತಿದೆ.
ಬೆಂಗಳೂರಿನ ನ್ಯಾಯಯುತ ಪಾಲು, ಕಾವೇರಿ 4ನೇ ಹಂತದ 9 ಟಿಎಂಸಿ ನೀರನ್ನು ತಮಿಳುನಾಡಿನ ಒತ್ತಡಕ್ಕೆ ಮಣಿದು ತಡೆದಿತ್ತು ಕಾಂಗ್ರೆಸ್. ಆಗ ಪಿ.ವಿ.ನರಸಿಂಹರಾವ್ ಪ್ರಧಾನಿ. ಕನ್ನಡಿಗರ ಕನಸುಗಳಿಗೆ ಕೊಳ್ಳಿ ಇಟ್ಟ ಅದೇ ಪಕ್ಷ ಈಗ ಸತ್ಯಗಳನ್ನು ಹೂತು ಮುಜುಗರವಿಲ್ಲದೆ ಮತಯಾತ್ರೆಗೆ ಹೊರಟಿದೆ.

ಆಗ ಸಿಎಂ ಆಗಿದ್ದ ಗೌಡರನ್ನು ತಡೆದ ಪಕ್ಷಕ್ಕೆ ಪ್ರಧಾನಿಯಾದ ಗೌಡರನ್ನು ತಡೆಯಲು ಧೈರ್ಯ ಸಾಲಲಿಲ್ಲ. ಕಾಂಗ್ರೆಸ್ ಕುತ್ಸಿತತನದಿಂದ ತಡೆಯಲ್ಪಟ್ಟಿದ್ದ 9 ಟಿಎಂಸಿ ನೀರು ರಾಜ್ಯಕ್ಕೆ ದಕ್ಕುವ ಯೋಜನೆಗೆ ಮಣ್ಣಿನಮಗ ಎದೆಗುಂದದೆ ಹಸಿರುನಿಶಾನೆ ತೋರಿದ್ದರು. ಜಪಾನ್ʼನಿಂದ ಹಣವನ್ನೂ ತಂದರು. ಬೆಂಗಳೂರಿಗೆ ಕಾವೇರಿ ನೀರು ಕೊಟ್ಟವರು ದೇವೇಗೌಡರು. ಜೀವಜಲ ತಂದು ಬವಣೆ ನೀಗಿಸಿದವರು ಅವರೇ. ಈ ಭಗೀರಥನನ್ನೇ ಮರೆತ ಕಾಂಗ್ರೆಸ್ ‘ ಕೃತಘ್ನ ‘ ರಾಜಕಾರಣಕ್ಕೆ ಏನು ಹೇಳುವುದು..?

ಕಾಂಗ್ರೆಸ್’ನ 5 ವರ್ಷದ ಸರಕಾರವೇ ಇತ್ತು. ʼಸಿದ್ದಹಸ್ತರೇʼ ಸಿಎಂ ಆಗಿದ್ದರು. ಆಗ ಕೇಂದ್ರದ ಮುಂದೆ ಪ್ರತಾಪ ತೋರಬಹುದಿತ್ತು. ಬರೀ ಮಾತಿನ ಉತ್ತರ ಪೌರುಷ. ಆಗ ಗಾಂಧೀಜಿ ಪ್ರತಿಮೆ ಮುಂದೆ ಉಪವಾಸ ಕೂತ ಮಣ್ಣಿನಮಗನ ಖದರಿಗೆ ಕೇಂದ್ರವೇ ನಡುಗಿತ್ತು. ದಿಲ್ಲಿಯಿಂದ ಮಂತ್ರಿಗಳು ಓಡಿಬಂದರು. ಅದೆಲ್ಲವನ್ನೂ ಕಾಂಗ್ರೆಸ್ ಮರೆತಿದೆಯಾ?ಹೌದು. ಜಾಣ ಮರೆವು ಕೂಡ ಒಂದು ರೋಗ. ಮಲತಾಯಿ ದೋರಣೆಯೇ ಮೈವೇತ್ತ ಕಾಂಗ್ರೆಸ್ ಈಗ ಪವಿತ್ರ ಗಂಗೆಯನ್ನೂ ಮತಕ್ಕೆ ಬಳಸುತ್ತಿದೆ. ಆಗ ಏನೂ ಮಾಡದ ʼಉತ್ತರಕುಮಾರ ಸಿದ್ದಸೂತ್ರಧಾರʼ, ಈಗೇನು ಮಾಡಲು ಸಾಧ್ಯ? ಆದರೆ; ರಾಜ್ಯದ ಹಿತದ ಪ್ರಶ್ನೆ ಬಂದಾಗ ಗೌಡರು ರಾಜಿಯಾದವರಲ್ಲ. ಅವರೊಬ್ಬರಿಂದಲೇ ಮೇಕೆದಾಟು ಯೋಜನೆ ಸಾಕಾರ ಸಾಧ್ಯ.

ಇಲ್ಲಿ 30 ವರ್ಷ ಆಳಿದವರು ಕಾವೇರಿ-ಕೃಷ್ಣಾ ವಿಚಾರದಲ್ಲಿ ಕೊಟ್ಟ ಕೊಡುಗೆ ಏನು? ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಸ್ಲೋಗನ್ ಹೇಳಿಕೊಂಡು ಹೋಗಿ ಉತ್ತರ ಕರ್ನಾಟಕಕ್ಕೆ ಟೋಪಿ ಹಾಕಿದ್ದಾಗಿದೆ. ಮೇಕೆದಾಟು ವಿಚಾರದಲ್ಲಿಯೂ ಅದೇ ಆಗಲಿದೆ.ದೇವೇಗೌಡರು ಕೃಷ್ಣೆ, ಕಾವೇರಿ ಕೊಳ್ಳದಲ್ಲಿ ಮಾಡಿದ ಸಾಧನೆಗಳನ್ನು ತಿಳಿಯಲು ಇತಿಹಾಸದ ಪುಟಗಳನ್ನು ತೆರೆದು ನೋಡಬೇಕು.

ಈಗ ಬೇಕಿರುವುದು ತಾಂತ್ರಿಕವಾಗಿ ಮೇಕೆದಾಟು ಯೋಜನೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗೆ ಒಪ್ಪಿಗೆ ಪಡೆಯಲು ಹೋರಾಟ ನಡೆಸಬೇಕು. ಅದು ಬಿಟ್ಟು ಹೊಸ ಸ್ಲೋಗನ್ ಅಗತ್ಯ ಇಲ್ಲ.ಪಾಪ ತೊಳೆಯುವ ತಾಯಿ ʼಲೋಕಪಾವನಿʼ ಈಗ ವೋಟಿನ ದಾಳವಾಗುತ್ತಿರುವುದು ನಾಡಿನ ದುರ್ದೈವ. ನೀರಿನ ಮುಂದೆ ʼಕಪಟ ನಾಟಕʼ ಮಾಡುವ ಸಿದ್ದಹಸ್ತ, ಡಿಸೈನ್ ಶೂರರಿಗೆ ಮುಂದೆ ಕಾದಿದೆ ಶಾಸ್ತಿ. ಭೂತಾಯಿ ಒಡಲಿನ ಮಣ್ಣು ಬಗೆದ, ಕಲ್ಲುಬಂಡೆಗಳನ್ನೇ ನುಂಗಿದ ʼರಕ್ಕಸ ರಾಜಕಾರಣʼದ ಕಾಕದೃಷ್ಟಿ ಈಗ ತಾಯಿ ಕಾವೇರಿ ಮೇಲೂ ಬಿದ್ದಿದೆ.

ನಿಮ್ಮ ʼಬ್ರೂಟಸ್ʼ ಬುದ್ಧಿ, ಸರಕಾರವನ್ನೇ ಸ್ವಾಹ ಮಾಡಿದ ʼಸಿದ್ಧಕಲೆʼಯ ಬಗ್ಗೆ 2018ರಲ್ಲೇ ನನಗೆ ಅರಿವಾಯಿತು. ‘ಕೈ’ ಚಿಹ್ನೆ ಇಟ್ಟುಕೊಂಡು ಕಂಡೋರ ಮೇಲೆ ʼಕೈʼ ಇಡುವ ಭಸ್ಮಾಸುರ ರಾಜಕಾರಣದ ಅನುಭವ ನನಗೂ, ದೇವೇಗೌಡರಿಗೂ ಆಗಿದೆ. ಈ ಪಾದಯಾತ್ರೆ ಯಿಂದ ಜನರಿಗೇನು ಸಂದೇಶ ನೀಡುತ್ತಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

 

Share Post