Politics

ವಿರೋಧಿಗಳಿಗೆ ಟಿಕೆಟ್‌ ತಪ್ಪಿಸಿದರಾ ಮಾಜಿ ಸಿಎಂ ಯಡಿಯೂರಪ್ಪ?; ಬಂಡಾಯಕ್ಕೆ ನಲುಗುತ್ತಾ ಕಮಲ ಪಕ್ಷ?

ಬೆಂಗಳೂರು; ಲೋಕಸಭಾ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ರಿಲೀಸ್‌ ಆಗಿದೆ.. ರಾಜ್ಯದ ಬಿಜೆಪಿ ಪಾಲಿನ 25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ.. ಇದ್ರಲ್ಲಿ 8 ಹಾಲಿ ಸಂಸದರಿಗೆ ಟಿಕೆಟ್‌ ಕೈತಪ್ಪಿದೆ.. ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ವಿರೋಧಿಗಳಿಗೆ ಟಿಕೆಟ್‌ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಹೈಕಮಾಂಡ್‌ ಕೂಡಾ ಲೆಕ್ಕಾಚಾರ ಮಾಡಿ ಹಲವು ಕ್ಷೇತ್ರಗಳಲ್ಲಿ ರಾಜ್ಯದ ಯಾವ ನಾಯಕನ ಮಾತೂ ಕೇಳದೇ ತಾನೇ ಅಭ್ಯರ್ಥಿಗಳನ್ನು ಪ್ರಕಟಿಸಿದೆ.. ಈ ಬಾರಿ ಬಿ.ಎಲ್‌.ಸಂತೋಷ್‌ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದ್ದಾರೆ..

ಇದನ್ನೂ ಓದಿ; ಕಾಂತೇಶ್‌ಗೆ ಟಿಕೆಟ್‌ ಇಲ್ಲ, ಶೆಟ್ಟರ್‌ಗೆ ಟಿಕೆಟ್‌ ಕನ್ಫರ್ಮ್‌ ಇಲ್ಲ!

ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಎಸ್‌ವೈ ಬಣದ ಮೇಲುಗೈ;

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್‌ ಹೆಚ್ಚು ಹಸ್ತಕ್ಷೇಪ ಮಾಡಿರಲಿಲ್ಲ.. ರಾಜ್ಯದ ನಾಯಕರು ಹೇಳಿದವರಿಗೆ ಟಿಕೆಟ್‌ ನೀಡಲಾಗಿತ್ತು.. ಒಂದಷ್ಟು ಕಡೆ ಬಿ.ಎಲ್‌.ಸಂತೋಷ್‌ ಅವರ ಮಾತೂ ವರ್ಕೌಟ್‌ ಆಗಿತ್ತು.. ಆದರೂ ಬಿಜೆಪಿ ಗೆಲ್ಲಲಿಲ್ಲ.. ಈ ಬಾರಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಮಾತಿಗೆ ಹೈಕಮಾಂಡ್‌ ಹೆಚ್ಚು ಮನ್ನಣೆ ನೀಡಿದೆ.. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ತಮ್ಮ ವಿರೋಧಿಗಳಿಗೆ ಟಿಕೆಟ್‌ ತಪ್ಪಿಸುವ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ತಮಗೆ ಬೇಕಾದವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಡಿಯೂರಪ್ಪ ಎಡವಿದ್ದರೂ, ಟಿಕೆಟ್‌ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ.

ಇದನ್ನೂ ಓದಿ; ಬಿಜೆಪಿ ಎರಡನೇ ಪಟ್ಟಿ ಪ್ರಕಟ; ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳ ವಿವರ

ಯಾರಿಗೆ ಟಿಕೆಟ್‌ ತಪ್ಪಿತು..? ಯಾರಿಗೆ ಸಿಕ್ಕಿತು..?

ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ನಡುವೆ ಅಷ್ಟಕ್ಕಷ್ಟೇ ಎಂಬಂತಹ ಸಂಬಂಧವಿತ್ತು.. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರು ಪ್ರತಾಪ ಸಿಂಹ ಅವರಿಗೆ ಟಿಕೆಟ್‌ ತಪ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಹಾಗೂ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಟಿಕೆಟ್‌ ತಪ್ಪಿಸುವಲ್ಲೂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈದರ ಜೊತೆಗೆ ಉಡುಪಿ-ಚಿಕ್ಕಮಗಳೂರು ಸಂಸದೆ ಸೋಭಾ ಕರಂದ್ಲಾಜೆಗೆ ಟಿಕೆಟ್‌ ನೀಡಬಾರದು ಎಂಬ ಅಭಿಯಾನ ಶುರುವಾಗಿತ್ತು.. ಈ ನಡುವೆ ತಂತ್ರಗಾರಿಕೆ ನಡೆಸಿರುವ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆಯಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ ಕುಟುಂಬದ ಗಾಯಿತ್ರಿ ಸಿದ್ದೇಶ್ವರ್‌ ಅವರಿಗೆ ಟಿಕೆಟ್‌ ಕೊಡಿಸುವಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಆದ್ರೆ ತುಮಕೂರಿಗೆ ವಿ.ಸೋಮಣ್ಣಗೆ ಟಿಕೆಟ್‌ ಕೊಡುವುದಕ್ಕೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರೋಧವಿದ್ದರೂ ಹೈಕಮಾಂಡ್‌ ವಿ.ಸೋಮಣ್ಣಗೆ ಮಣೆ ಹಾಕಿದೆ.

ಇದನ್ನೂ ಓದಿ; ಈಶ್ವರಪ್ಪ ಬಂಡಾಯವೇಳೋದು ಪಕ್ಕಾನಾ..?; ಕುತೂಹಲ ಕೆರಳಿಸಿದ ನಾಳಿನ ಸಭೆ!

ಹೈಕಮಾಂಡ್‌ ನೇರವಾಗಿ ನಿರ್ಧಾರ ತೆಗೆದುಕೊಂಡ ಕ್ಷೇತ್ರಗಳು;

ದಕ್ಷಿಣ ಕನ್ನಡಕ್ಕೆ ಕಟೀಲ್‌ ಅವರಿಗೆ ಯಡಿಯೂರಪ್ಪ ಟಿಕೆಟ್‌ ತಪ್ಪಿಸಿದರಾದರೂ, ಅವರಿಗೆ ಬೇಕಾದ ಅಭ್ಯರ್ಥಿಗೆ ಟಿಕೆಟ್‌ ಕೊಡಿಸಲಾಗಿಲ್ಲ. ಬದಲಾಗಿ ಹೈಕಮಾಂಡ್‌ ನಾಯಕರೇ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರಿಗೆ ಟಿಕೆಟ್‌ ನೀಡಿದ್ದಾರೆ. ಬೆಂಗಳೂರು ಸೆಂಟ್ರಲ್‌ನಲ್ಲಿ ಪಿ.ಸಿ.ಮೋಹನ್‌, ಬಳ್ಳಾರಿಗೆ ಶ್ರೀರಾಮುಲು, ಹಾವೇರಿಗೆ ಬಸವರಾಜ ಬೊಮ್ಮಾಯಿ, ಮೈಸೂರಿಗೆ ಯದುವೀರ್‌, ಕೊಪ್ಪಳಕ್ಕೆ ಡಾ.ಬಸವರಾಜ ತ್ಯಾವಟೂರ್‌ ಆಯ್ಕೆಯಲ್ಲಿ ಹೈಕಮಾಂಡ್‌ ನೇರವಾದ ನಿರ್ಧಾರ ತೆಗೆದುಕೊಂಡಿದೆ. ಅಣ್ಣಾ ಸಾಹೇಬ್ ಜೊಲ್ಲೆಗೆ ಟಿಕೆಟ್‌ ಕೊಡಿಸುವಲ್ಲಿ ಬಿ.ಎಲ್.‌ಸಂತೋಷ್‌ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ; ಕೋಮುಭಾವನೆ ಕೆರಳಿಸಲು ಕಾಂಗ್ರೆಸ್ಸಿಗರಿಂದ ಸಿಎಎ ಬಳಕೆ; ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌

Share Post