National

8 ತಿಂಗಳು ತಿರುಪತಿ ತಿಮ್ಮಪ್ಪನ ಸನ್ನಿಧಿ ಕ್ಲೋಸ್‌

ತಿರುಪತಿ; ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು 2023ರ ವೇಳೆಗೆ ಆರರಿಂದ ಎಂಟು ತಿಂಗಳವರೆಗೆ ಮುಚ್ಚುವ ಸಾಧ್ಯತೆಯಿದೆ. ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಸ್ಥಾನದ ಗರ್ಭಗುಡಿಯ ಮೇಲಿರುವ ಮೂರು ಅಂತಸ್ತಿನ ಗೋಪುರ- ಆನಂದ ನಿಲಯಂಗೆ ಚಿನ್ನದ ಲೇಪನ ಮಾಡುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ 2023ರಲ್ಲಿ ಲೇಪನ ಕಾರ್ಯ ಮುಗಿಯುವವರೆಗೆ ಗರ್ಭಗುಡಿ ಮುಚ್ಚಲು ನಿರ್ಧರಿಸಲಾಗಿದೆ. ಇದು ಸುಮಾರು 6-8 ತಿಂಗಳ ಕಾಲಾವಧಿಯನ್ನು ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ದೇವಾಲಯದ ಮೇಲಿನ ಗುಮ್ಮಟದ ಆಕಾರದ ಗೋಪುರ ಅಥವಾ ‘ವಿಮಾನ’ದ ಚಿನ್ನದ ಲೇಪನ ಕಾರ್ಯ ಮುಗಿಯುವವರೆಗೆ ಭಕ್ತರಿಗಾಗಿ ಮುಖ್ಯ ದೇವಸ್ಥಾನದ ಪಕ್ಕದಲ್ಲಿರುವ ತಾತ್ಕಾಲಿಕ ದೇವಸ್ಥಾನದಲ್ಲಿ ವೆಂಕಟೇಶ್ವರನ ವಿಗ್ರಹದ ಪ್ರತಿಕೃತಿಯನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ವರ್ಷ ಟಿಟಿಡಿ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದು, ಇದಕ್ಕಾಗಿ ಫೆಬ್ರವರಿ 23ರಂದು ಬಾಲಾಲಯವನ್ನು ಪ್ರದರ್ಶಿಸಲಾಗುವುದು. ದಾನಿಗಳ ಕೊಡುಗೆಯ ಹೊರತಾಗಿ, ಸಾಮಾನ್ಯ ಯಾತ್ರಿಕರು ಟಿಟಿಡಿಗೆ ಅರ್ಪಿಸುವ ಚಿನ್ನವನ್ನು ವಿಮಾನ ಗೋಪುರದ ಚಿನ್ನದ ಕೆಲಸಗಳಲ್ಲಿಯೂ ಬಳಸಲಾಗುವುದು. ಇದು ಭಕ್ತರನ್ನು ಪ್ರತಿಷ್ಠಿತ ಕಾರ್ಯದ ಭಾಗವಾಗಿಸುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಇತ್ತೀಚೆಗೆ ತಿಳಿಸಿದ್ದಾರೆ. ಪ್ರಸ್ತುತ 50 ಅಕ್ಕಸಾಲಿಗರು ಮೇಲಾವರಣಕ್ಕೆ ಅಂಟಿಸಲು ಚಿನ್ನದ ತಟ್ಟೆಗಳನ್ನುತಯಾರಿಸುವಲ್ಲಿ ನಿರತರಾಗಿದ್ದಾರೆ.

Share Post