National

ಸ್ನೇಹಿತನ ಮದುವೆ ಮುಗಿಸಿ ಬರ್ತಿದ್ದವರು ಸೇರಿದ್ದು ಮಸಣಕ್ಕೆ-ಜವರಾಯನ ಅಟ್ಟಹಾಸಕ್ಕೆ ಮೂವರು ಬಲಿ

ಕರ್ನೂಲ್:‌ ಸ್ನೇಹಿತನ ಮದುವೆಗೆ ಹೋಗಿ ಹಿಂತಿರುಗುತ್ತಿದ್ದಾಗ ಭೀಕರ ರಸ್ತೆ ಅಪಘಾತವಾಗಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಾಗರ್ ಕರ್ನೂಲ್ ಜಿಲ್ಲೆಯಲ್ಲಿ ಸಂಭವಿಸಿದೆ. ಕಾರು ಮೋರಿಗೆ ಡಿಕ್ಕಿ ಹೊಡೆದ ಬಳಿಕ ಪಲ್ಟಿಯಾಗಿದ್ದರಿಂದ ಮೂವರು ಸಾವನ್ನಪ್ಪಿದ್ದಾರೆ. ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಬೂಬಾಬಾದ್ ಮತ್ತು ನಲ್ಲೊಂಡಾ ಜಿಲ್ಲೆಯ ಯುವಕರು ನಿನ್ನೆ ನಾಗರ್ ಕರ್ನೂಲ್ ಜಿಲ್ಲೆಯ ವೆಲ್ದಂಡ ಮಂಡಲದಲ್ಲಿ ಕಾರಿನಲ್ಲಿ ಸ್ನೇಹಿತನ ಮದುವೆ ಸಮಾರಂಭಕ್ಕೆ ತೆರಳಿದ್ದರು. ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಇಂದು ಕಾರಿನಲ್ಲಿ ವಾಪಸ್ ಪ್ರಯಾಣ ಬೆಳೆಸಿದ್ದಾರೆ. ನಡುರಸ್ತೆಯಲ್ಲಿ ಕಲ್ವಕುರ್ತಿ ಮಂಡಲ ಮರ್ಚ ಬಳಿ ಕಾರೊಂದು ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದಯ ಬಳಿಕ  ಪಲ್ಟಿಯಾಗಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮತ್ತು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮೃತರಲ್ಲಿ ಇಬ್ಬರು ಯುವತಿಯರು ಇದ್ದರೆಂದು ತಿಳಿದುಬಂದಿದೆ. ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ನಾಗರ್ ಕರ್ನೂಲ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಮೃತರನ್ನು ಕಿರಣ್ಮಯಿ, ಸಿರಿಶಾ ಮತ್ತು ಅರವಿಂದ್ ಎಂದು ಗುರುತಿಸಲಾಗಿದೆ. ಮುಂದಿನ ಸೀಟಿನಲ್ಲಿ ಅರವಿಂದ್, ಹಿಂದಿನ ಸೀಟಿನಲ್ಲಿ ಇಬ್ಬರು ಹುಡುಗಿಯರು ಇದ್ದರೆಂದು ಹೇಳಲಾಗಿದೆ.  ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದರಿಂದ ಡ್ರಂಕ್‌ ಅಂಡ್ ಡ್ರೈವ್‌ನಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share Post