National

ಕಾಂಗ್ರೆಸ್‌ ಪಕ್ಷ ಸೇರೋದಿಲ್ಲ ಎಂದ ರಾಜಕೀಯ ತಂತ್ರಗಾರ ಪ್ರಶಾಂತ್‌ ಕಿಶೋರ್‌

ನವದೆಹಲಿ: ಕಾಂಗ್ರೆಸ್‌ ಪಕ್ಷ ಸೇರುವುದರ ಬಗ್ಗೆ ಸೋನಿಯಾಗಾಂಧಿ ಜೊತೆ ಹಲವು ಸಭೆಗಳನ್ನು ನಡೆಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌, ಈಗ ತಾನು ಕಾಂಗ್ರೆಸ್‌ಗೆ ಸೇರುವುದಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ರಣದೀಪ್‌ ಸುರ್ಜೆವಾಲಾ ಅವರೇ ಟ್ವೀಟ್‌ ಮಾಡಿದ್ದಾರೆ.

 

‘ಪ್ರಶಾಂತ್‌ ಕಿಶೋರ್​ ಅವರೊಂದಿಗೆ ಪ್ರಸ್ತುತ ರಾಜಕೀಯ ಚರ್ಚೆಯ ನಂತರ ಕಾಂಗ್ರೆಸ್​​ ಅಧ್ಯಕ್ಷರು ಮುಂಬರುವ ಲೋಕಸಭಾ ಚುನಾವಣೆಗೋಸ್ಕರ ‘ಎಂಪವರ್ಡ್ ಆ್ಯಕ್ಷನ್ ಗ್ರೂಪ್ 2024′ ರಚನೆ ಮಾಡಿದ್ದಾರೆ. ನಿರ್ದಿಷ್ಟ ಜವಾಬ್ದಾರಿಯೊಂದಿಗೆ ಆ ಗುಂಪಿನ ಭಾಗವಾಗಲು ಕಿಶೋರ್​ ಅವರಿಗೆ ಪಕ್ಷ ಸೇರ್ಪಡೆಗೋಸ್ಕರ ಆಹ್ವಾನ ನೀಡಲಾಗಿತ್ತು. ಆದರೆ, ಅವರು ನಿರಾಕರಿಸಿದರು. ಪಕ್ಷಕ್ಕಾಗಿ ಅವರು ನೀಡಿರುವ ಸಲಹೆಗಳನ್ನು ನಾವು ಪ್ರಶಂಸಿಸುತ್ತೇವೆ’

 

ಹೀಗಂತ ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ.  ಪ್ರಶಾಂತ್ ಕಿಶೋರ್‌ರನ್ನು ಕಾಂಗ್ರೆಸ್​ ಪಕ್ಷಕ್ಕೆ ಸೇರಿಸಕೊಳ್ಳುವ ಸಂಬಂಧ ರಚನೆ ಮಾಡಲಾಗಿದ್ದ ಸಮಿತಿ ನಿನ್ನೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವರದಿ ಸಲ್ಲಿಸಿತ್ತು. ಇದರಲ್ಲಿ ಪ್ರಶಾಂತ್ ಕಿಶೋರ್ ಪಕ್ಷ ಸೇರ್ಪಡೆ ಸಾಧಕ-ಬಾಧಕಗಳ ಕುರಿತು ಮಾಹಿತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಪ್ರಶಾಂತ್‌ ಕಿಶೋರ್‌ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

Share Post