Health

ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್‌ ಗೆ ಕ್ಯಾನ್ಸರ್‌; ಕಿಮೋ ಥೆರಪಿ ಚಿಕಿತ್ಸೆ

ಬೆಂಗಳೂರು; ಭಾರತದ ಸೂರ್ಯಮಿಷನ್‌ ಆದಿತ್ಯ ಎಲ್‌1 ಉಡಾವಣೆ ಸಮಯದಲ್ಲೇ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದರಂತೆ. ಸಂದರ್ಶನವೊಂದರಲ್ಲಿ ಸೋಮನಾಥ್‌ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಅವರು ಚಂದ್ರಯಾನ-3 ಸಮಯದಲ್ಲಿ ಕೆಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುತ್ತಿದ್ದವು. ಆದ್ರೆ ಆಗ ಪರೀಕ್ಷೆ ಮಾಡಿಸಿದಾಗ ಯಾವುದೇ ಸಮಸ್ಯೆ ಬಹಿರಂಗವಾಗಿರಲಿಲ್ಲ. ಆದಿತ್ಯ ಎಲ್‌ 1 ಉಡಾವಣೆ ದಿನದಂದೇ ಕ್ಯಾನ್ಸರ್‌ ಇರುವುದು ಗೊತ್ತಾಯಿತು ಎಂದು ಎಸ್‌.ಸೋಮನಾಥ್‌ ಹೇಳಿಕೊಂಡಿದ್ದಾರೆ.

ಆದಿತ್ಯ ಎಲ್‌-1 ಉಡಾವಣೆ ಬಳಿಕ ಸ್ಕ್ಯಾನಿಂಗ್‌;

ಆದಿತ್ಯ ಎಲ್‌-1 ಉಡಾವಣೆ ಬಳಿಕ ಸ್ಕ್ಯಾನಿಂಗ್‌; ಸೂರ್ಯ ಮಿಷನ್‌ ಆದಿತ್ಯ ಎಲ್‌-1 ಉಡಾವಣೆ ಮಾಡಲಾಯಿತು. ಅನಂತರ ಆವತ್ತೇ ಹೊಟ್ಟೆಯ ಸ್ಕ್ಯಾನ್‌ ಮಾಡಿಸಲಾಯಿತು. ಆಗ ಕ್ಯಾನ್ಸರ್‌ ಇರುವುದು ಪತ್ತೆಯಾಯಿತು. ಇದರಿಂದಾಗಿ ನನಗೆ ಹಾಗೂ ನನ್ನ ಕುಟುಂಬದವರಿಗೆ ನೋವಾಯಿತು. ವಿಜ್ಞಾನಿಗಳು ಕೂಡಾ ಬೇಸರಗೊಂಡಿದ್ದರು ಎಂದು ಸೋಮನಾಥ್‌ ತಿಳಿಸಿದ್ದಾರೆ.

ಅನುವಂಶಿಕವಾಗಿ ಸೋಮನಾಥ್‌ಗೆ ಕ್ಯಾನ್ಸರ್‌;

ಅನುವಂಶಿಕವಾಗಿ ಸೋಮನಾಥ್‌ಗೆ ಕ್ಯಾನ್ಸರ್‌; ಇಸ್ರೋ ಅಧ್ಯಕ್ಷ ಸೋಮನಾಥ್‌ ಅವರಿಗೆ ಅನುವಂಶಿಕವಾಗಿ ಈ ಕ್ಯಾನ್ಸರ್‌ ಬಂದಿದೆ ಎಂದು ಹೇಳಲಾಗುತ್ತಿದೆ. ಅವರು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಅವರಿಗೆ ಉದರ ಕ್ಯಾನ್ಸರ್‌ ಇದ್ದು, ತಕ್ಷಣವೇ ಕಿಮೋ ಥೆರಪಿ ಕೂಡಾ ಮಾಡಲಾಗಿದೆ ಎಂದು ತಿಳಿದುಬಂದಿದೆ.

ನಾನು ನಾಲ್ಕು ದಿನ ಮಾತ್ರ ಆಸ್ಪತ್ರೆಯಲ್ಲಿದ್ದೆ. ಈಗ ಚೇತರಿಸಿಕೊಂಡಿದ್ದೇನೆ. ಚಿಕಿತ್ಸೆ ಸುದೀರ್ಘ ಪ್ರಕ್ರಿಯೆಯಾಗಿದೆ. ನಾನು ಈ ಯುದ್ಧದಲ್ಲಿ ಹೋರಾಡುತ್ತೇನೆ.  ಯಾವುದೇ ನೋವಿಲ್ಲದೆ ಇಸ್ರೋದಲ್ಲಿ ಕೆಲಸ ಮಾಡಲು ಶುರು ಮಾಡಿದ್ದೇವೆ ಎಂದೂ ಅವರು ಹೇಳಿದ್ದಾರೆ.

2023ರ ಸೆಪ್ಟೆಂಬರ್‌ 2 ರಂದು ಆದಿತ್ಯ ಎಲ್‌-೧ ಉಡಾವಣೆ ಮಾಡಲಾಗಿತ್ತು. ಅಂದೇ ಅವರಿಗೆ ಕ್ಯಾನ್ಸರ್‌ ಇರುವುದು ಗೊತ್ತಾಗಿತ್ತು ಎಂದು ತಿಳಿದುಬಂದಿದೆ.

ಶ್ರೀಧರ ಪಣಿಕ್ಕರ್ ಸೋಮನಾಥ್ (ಜನನ ಜುಲೈ 1963) ಒಬ್ಬ ಭಾರತೀಯ ಏರೋಸ್ಪೇಸ್ ಇಂಜಿನಿಯರ್ ಆಗಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ, ISRO ಚಂದ್ರಯಾನ-3 ಎಂಬ ಹೆಸರಿನ ಮೂರನೇ ಭಾರತೀಯ ಚಂದ್ರನ ಪರಿಶೋಧನಾ ಕಾರ್ಯಾಚರಣೆಯನ್ನು ನಡೆಸಿತು . ವಿಕ್ರಮ್ ಹೆಸರಿನ ಲ್ಯಾಂಡರ್ ಮತ್ತು ಪ್ರಗ್ಯಾನ್ ಹೆಸರಿನ ರೋವರ್ 23 ಆಗಸ್ಟ್ 2023 ರಂದು 18:04ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ಬಂದಿಳಿದವು , ಭಾರತವು ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶ ಮತ್ತು ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶವಾಗಿದೆ.

 

 

 

Share Post