CrimeDistricts

ಪ್ರಿಯಕರನಿಗೆ ಹತ್ತು ಸಾವಿರ ಕೊಟ್ಟು ಗಂಡನನ್ನು ಕೊಲೆ ಮಾಡಿಸಿದ ಪತ್ನಿ

ಕಾರವಾರ; ಗಂಡನ ಕೈಗೆ ಹತ್ತು ಸಾವಿರ ರೂಪಾಯಿ ಕೊಟ್ಟು ತನ್ನ ಪ್ರಿಯಕರನೊಂದಿಗೆ ಬೀಚ್‌ ನೋಡಲೆಂದು ಗಂಡನನ್ನು ಕಳುಹಿಸಿಕೊಟ್ಟು, ಅಲ್ಲಿ ಗಂಡನನ್ನು ಕೊಲೆ ಮಾಡಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟ ಭಾಗದ ಮಾಸ್ತಿಮನೆ ದೇವಸ್ಥಾನದ ಹಿಂಭಾಗ ಶವವೊಂದು ಪತ್ತೆಯಾಗಿತ್ತು. ಅದರ ಜಾಡು ಹಿಡಿದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಶೀರ್‌ ಸಾಬ್‌ ಎಂಬಾತನೇ ಕೊಲೆಯಾದ ವ್ಯಕ್ತಿ. ಈತನ ಪತ್ನಿ ರಜಮಾ ಎಂಬಾಕೆಯೇ ಗಂಡನನ್ನು ಕೊಲ್ಲಿಸಿದ್ದಾಳೆ. ರಜಮಾ ಗದಗ ಮೂಲದ ಪರಶುರಾಮ ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಇದಕ್ಕೆ ಗಂಡ ಅಡ್ಡಿಯಾಗಿದ್ದ. ಹೀಗಾಗಿ ಪ್ರಿಯಕರನಿಗೆ ಹೇಳಿ ಗಂಡನನ್ನು ಕೊಲೆ ಮಾಡಿಸಲು ರಜಮಾ ತೀರ್ಮಾನಿಸಿದ್ದಳು.

ಸೆಪ್ಟೆಂಬರ್‌ 30ರಂದು ಗಂಡ ಬಶೀರ್‌ ಸಾಬ್‌ ಕೈಗೆ ಹತ್ತು ಸಾವಿರ ರೂಪಾಯಿ ಕೊಟ್ಟು ಮಂಗಳೂರು ಬೀಚ್‌ ನೋಡಿಕೊಂಡು ಬರುವಂತೆ  ಪ್ರಿಯಕರ  ಪರಶುರಾಮನ ಜೊತೆ ಕಳುಹಿಸಿದ್ದಳು.  ಅನಂತರ ಪರಶುರಾಮನ ದೊಡ್ಡಮ್ಮನ ಮಗ ರವಿ ಹಾಗೂ ಬಸವರಾಜ್‌ ಎಂಬುವವರು ಜೊತೆಯಾಗಿದ್ದಾರೆ.

ಎಲ್ಲರೂ ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ದೇವಿಮನೆ ಘಟ್ಟದಲ್ಲಿ ಇಳಿಯುತ್ತಾರೆ. ಅಲ್ಲಿನ ದೇವಸ್ಥಾನದ ಹಿಂಭಾಗದಲ್ಲಿ ಮದ್ಯ ಸೇವನೆ ಮಾಡುತ್ತಾರೆ. ಇದೇ ವೇಳೆಗೆ ಕಾಯುತ್ತಿದ್ದ ಪರಶುರಾಮ, ಬಶೀರ್‌ ಸಾಬ್‌ಗೆ ಹಿಂದಿನಿಂದ ಕಟ್ಟಿಗೆ ತೆಗೆದುಕೊಂಡು ಬಲವಾಗಿ ಹೊಡೆಯುತ್ತಾನೆ. ಆತನನ್ನು ಅಲ್ಲಿಯೇ ಸಾಯಿಸಿ, ಹತ್ತಿರದ ಕಾಡಿನಲ್ಲಿ ಶವ ಬಿಸಾಕಿ ಹೋಗಿರುತ್ತಾರೆ.

ಮೃತದೇಹ ಸಿಕ್ಕಾಗ ಅದು ಯಾರದೆಂದು ಪೊಲೀಸರಿಗೆ ಮಾಹಿತಿ ಇರಲಿಲ್ಲ. ಆದರೂ ಪ್ರಕರಣದ ತನಿಖೆ ಕೈಗೊಂಡವರಿಗೆ ಮೃತನ ಮಾಹಿತಿ ಸಿಗುತ್ತದೆ. ತನಿಖೆ ನಡೆಸಿದಾಗ ಈ ಕೊಲೆ ಹಿಂದೆ ಆತನ ಪತ್ನಿಯೇ ಇದ್ದಾಳೆ ಅನ್ನೋದು ಸಾಬೀತಾಗುತ್ತದೆ. ಪೊಲೀಸರು ನಾಲ್ವರೂ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

 

Share Post