CrimeDistricts

ತಾಯಿಯೇ ಕೊಲೆಗಾತಿ; ಪ್ರಿಯಕರನಿಗಾಗಿ ಮಗನ ಪ್ರಾಣ ತೆಗೆದಳು..!

ಬೆಳಗಾವಿ; ತಾಯಿಯೇ ಪ್ರತ್ಯಕ್ಷ ದೇವರು ಅಂತಾ ಕರೀತೀವಿ. ಆದ್ರೆ ತಾಯಂದಿರು ರಾಕ್ಷಿಸಿಯರೂ ಆಗಿರುತ್ತಾರೆ. ಅದಕ್ಕೊಂದು ಉದಾಹರಣೆ ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ನಾವಿ ಗಲ್ಲಿ ನಿವಾಸಿ ಸುಧಾ ಅಲಿಯಾಸ್‌ ಮಾಧವಿ ಬೋಸಲೆ. ಈಕೆ ತನ್ನ ಪ್ರಿಯಕರನಿಗಾಗಿ ಹೆತ್ತ ಮಗನನ್ನೇ ಕೊಂದಿದ್ದಾಳೆ. ನಂತರ ಹೃದಯಘಾತದಿಂದ ಸಾವನ್ನಪ್ಪಿದ್ದಾನೆಂದು ಕಥೆ ಕಟ್ಟಿದ್ದಾಳೆ. ಆದ್ರೆ, ಮರಣೋತ್ತರ ಪರೀಕ್ಷೆಯಲ್ಲಿ ರಾಕ್ಷಸಿ ತಾಯಿಯ ಕೃತ್ಯ ಬಯಲಾಗಿದೆ.

ಮೇ 28ರಂದು ಸುಧಾ ಮಗ ಹರಿಪ್ರಸಾದ್‌ ಮನೆಯಲ್ಲಿ ಮಲಗಿದ ರೀತಿಯಲ್ಲೇ ಸಾವನ್ನಪ್ಪಿದ್ದ. ಈ ವೇಳೆ ತಾಯಿ ಸುಧಾ ಮಗ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ ಎಂದು ಕಥೆ ಕಟ್ಟಿದ್ದಳು. ಆದ್ರೆ ಹುಡುಗ ತಂದೆ ಮಾತ್ರ ಇದು ಸಹಜ ಸಾವಲ್ಲ ಎಂದು ರಾಯಬಾಗ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದಾಗಿ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಆ ವರದಿಯಲ್ಲಿ ಕೊಲೆ ಎಂದು ಬಯಲಾಗಿದೆ.

ಕೂಡಲೇ ಪೊಲೀಸರು ತನಿಖೆ ಶುರು ಮಾಡಿದಾಗ ಸ್ವಂತ ತಾಯಿಯೇ ಕೊಲೆಗಾತಿ ಅನ್ನೋದು ಬಯಲಾಗಿದೆ. ಸುಧಾಳಿಗೆ ಏಳು ಮಂದಿ ಕೊಲೆಯಲ್ಲಿ ನೆರವಾಗಿದ್ದಾರೆ. ಈ ಸಂಬಂಧ ಸುಧಾ ಜೊತೆ ಇನ್ನೂ ನಾಲ್ವರನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಂದಹಾಗೆ ಸುಧಾ ಹಲವು ವರ್ಷಗಳ ಹಿಂದೆಯೇ ಗಂಡನನ್ನು ಬಿಟ್ಟು ಒಬ್ಬರು ಗಂಡು ಮಕ್ಕಳೊಂದಿಗೆ ಪಾತ್ರೆ ಅಂಗಡಿಯನ್ನಿಟ್ಟುಕೊಂಡು ಬೇರೆ ಕಡೆ ಜೀವನ ಮಾಡುತ್ತಿದ್ದಳು. ಈ ನಡುವೆ ಸುಧಾ ಪಾತ್ರೆ ಅಂಗಡಿಗೆ ಗ್ರಾಹಕನಾಗಿ ಬಂದ ಕುಮಾರ್‌ ಬಬಲೇಶ್ವರ್‌ ಎಂಬಾತನ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದಾಳೆ. ಇದು ಮಗ ಹರಿಪ್ರಸಾದ್‌ಗೆ ಗೊತ್ತಾಗಿದೆ. ಆತ ಆಕ್ರೋಶಗೊಂಡು ತಾಯಿಯ ಜೊತೆ ಜಗಳ ಮಾಡಿದ್ದಾನೆ. ಜೊತೆಗೆ ಸಂಬಂಧಿಕರಿಗೆಲ್ಲಾ ಮಾಹಿತಿ ನೀಡಿದ್ದಾನೆ.

ಇದರಿಂದಾಗಿ ಸಂಬಂಧಿಕರೆಲ್ಲಾ ಸುಧಾಗೆ ಕರೆ ಮಾಡಿ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕುಪಿತಗೊಂಡಿದ್ದ ಸುಧಾ, ತನ್ನ ಮಗನನ್ನೇ ಮುಗಿಸಲು ಸ್ಕೆಚ್‌ ಹಾಕಿದ್ದಾಳೆ. ಮೇ28ರಂದು ಪ್ರಿಯಕರ ಕುಮಾರ್ ಜತೆಗೆ ಸೇರಿಕೊಂಡು ಹರಿಪ್ರಸಾದ್ ಮಲಗಿದ ಮೇಲೆ ಸುಧಾ, ಚಿಕ್ಕ ಮಗ, ಆಕೆಯ ಸಹೋದರಿ ವೈಶಾಲಿ ಮಾನೆ, ಸಹೋದರಿ ಮಗ ಗೌತಮ್ ಮಾನೆ, ಪ್ರಿಯಕರ ಕುಮಾರ್ ಬಬಲೇಶ್ವರ ಸೇರಿ ಎಂಟು ಜನ ಕೊಲೆ ಮಾಡಿದ್ದಾರೆ. ಹರಿಪ್ರಸಾದ್​ನನ್ನ ಉಸಿರುಗಟ್ಟಿಸಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Share Post